Saturday, September 12, 2015

ವಿಷಯ: ಚುನಾವಣೆಯಲ್ಲಿ ಹಣದ ಪ್ರಭಾವ.
ನಾಟಕ 

ಝಣ ಝಣ ಚುನಾವಣೆ

ರಚನೆ: ಸಂತೋಷ ಗುಡ್ಡಿಯಂಗಡಿ

ದೃಶ್ಯ-1.
(ಆರು ಜನ ಪತ್ರಿಕೆ ಓದುತ್ತಿರುವಾಗ ಹಿನ್ನೆಲೆಯಲ್ಲಿ ಕುರ್ಚಿ ಮಾರುವ ಹೆಂಗಸಿನ ಸದ್ದು ಕೇಳಿಸುವುದು.)
ಧ್ವನಿ: ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಎಲ್ಲರು: ಹಾಂ ಕುರ್ಚಿ?
ನಿರೂಪಕಿ: ಮಂತ್ರಿ ಆಗೋಕೆ ಬೇಕು ಕುರ್ಚಿ, ಎಮ್ಮೆಲ್ಲೆ ಆಗೋಕೆ ಬೇಕು ಕುರ್ಚಿ, ಅಧ್ಯಕ್ಷ
ಆಗೋಕೆ ಬೇಕು ಕುರ್ಚಿ, ಪಂಚಾಯ್ತಿ ಮೆಂಬರಾಗೋಕೆ ಬೇಕು ಕುರ್ಚಿ,ಲಂಚ
ತಗೊಳ್ಳೋಕೆ ಬೇಕು ಕುರ್ಚಿ, ಅಷ್ಟೇ ಅಲ್ಲ ಕಣ್ರೀ ಮೊಳೆ ಹೊಡಿಯೋಕೆಬೇಕೂ
ಕುರ್ಚಿ. ಇದು ಅಂತಿಂಥ ಕುರ್ಚಿ ಅಲ್ಲ ಕೂತ್ರೆ ಸಿಗುತ್ತೆ ತಿಜೋರಿ, ಬಿಟ್ರೆ ಬೀದಿ
ಭಿಕಾರಿ.
(ಎಲ್ಲರು “ಕುರ್ಚಿ ನನಗೆ ಬೇಕು ನನಗೆ ಬೇಕು” ಎನ್ನುವರು)
ನಿರೂಪಕಿ: ನೋಡುದ್ರಾ ಕುರ್ಚಿ ಇಲ್ದೆ ನಮ್ಮ ಜನ ಬದುಕಲ್ಲ. ಅದ್ರಲ್ಲೂ ರಾಜಕಾರಣಿಗಳನ್ನು ಕೇಳ್ಬೇಕೇ? ಎಷ್ಟ್ ಕೋಡ್ತೀರಿ ಕುರ್ಚಿಗೆ?
(ಗುಂಪಿಂದ 1ಕೋಟಿ 2ಕೋಟಿ 4ಕೋಟಿ 6ಕೋಟಿ 8ಕೋಟಿ 10ಕೋಟಿ ಎಂದು ಕೇಳಿ ಬರುವುದು.)
ನಿರೂಪಕಿ:   ನೋಡುದ್ರಾ ಕುರ್ಚಿಗೆ ಡಿಮ್ಯಾಂಡು? ಕುರ್ಚಿ ಮಾರಾಟಕ್ಕಿದೆ ಕುರ್ಚಿ
(ಎಲ್ಲರು ಬಂದು ನನಗೆ ನನಗೆ ಎಂದು ಕುರ್ಚಿಯನ್ನು ಎಳೆದಾಡುವರು. ಮುದುಕಿ ಒಬ್ಬಳು ಭಿಕ್ಷೆ ಬೇಡುತ್ತಾ ಬರುವಳು.)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ...... ಏನಾದ್ರೂ ತಿನ್ನಾಕ ಕೊಡ್ರವ್ವಾ......ಅಣ್ಣಾ ಏನಾದ್ರೂ ತಿನ್ನಾಕ ಕೊಡ್ರವ್ವಾ......
ಎಲ್ಲರು: ನಮಗೆ ಕುರ್ಚಿ ಬೇಕು ಕುರ್ಚಿ
(ಮುದುಕಿ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುವಳು.)
ನಿರೂಪಕಿ: ನೋಡಿದ್ರ ನಮ್ಮ ದೇಶ
ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡೋರು ಒಂದ್ಕಡೆ. ಕುರ್ಚಿಗಾಗಿ ಕಿತ್ತಾಡೋರು ಇನ್ನೊಂದ್ಕಡೆ. ಯಾರಿಗ್ ಬಂತ್ರೀ ಎಲ್ಲಿಗ್ ಬಂತ್ರೀ?
ಎಲ್ಲರು: ಏನು?
ನಿರೂಪಕಿ: ನಲವತ್ತೇಳರ ಸ್ವಾತಂತ್ರ್ಯ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ನಮ್ಮದು ಚಿಲ್ರೆ ಪಕ್ಷ. ಝಣ ಝಣ ಕಾಂಚಾಣದ ಪಕ್ಷ. ನಮಗೂ ಬಂದಿದೆ ಸ್ವಾತಂತ್ರ್ಯ
ನೋಟಿನ ಪಕ್ಷ: ನಾವು ನೋಟಿನ ಪಕ್ಷದವರು. ನಮಗೂ ಬಂದಿದೆ ನೋಡಿ ಸ್ವಾತಂತ್ರ್ಯ
ನಮ್ಮ  ಹತ್ರ ಚಿಲ್ರೆ ಮಾತೇ ಇಲ್ಲ. ನೋಟು ಗರಿ ಗರಿ ನೋಟು. ನೋಟಿನ ಪಕ್ಷ ಕಣ್ರೀ ನಮ್ದು ನೋಟಿನ ಪಕ್ಷ ಕಣ್ರೀ
ಚಿಲ್ರೆ ಪಕ್ಷ: ನಾವು ಚಿಲ್ರೆ ಪಕ್ಷದವರಾದ್ರೂ, ಚಿಲ್ರೆ ವ್ಯವಹಾರನೇ ಇಲ್ಲರೀ. ದೊಡ್ಡ ದೊಡ್ಡದ್ದನ್ನೆಲ್ಲ ಚಕಾಚಕ್ ಮಾಡಿ ಮುಗಿಸ್ತೀವಿ. ಈಗ ನೋಡಿ ದೇಶದ ತುಂಬಾ ಚಿಲ್ರೇದೇ ಮಾತು. ಚಿಲ್ರೆಚಿಲ್ರೆ ಸೇರಿನೇ ನೋಟಾಗೋದು ನೆನಪಿರಲಿ.
ನೋಟಿನ ಪಕ್ಷ: ಚಿಲ್ರೇನ ಇಟ್ಕೋಳ್ಳೋದು ಕಷ್ಟ ಕಣ್ರೀ. ಭಿಕ್ಷೆ ಹಾಕೋಕಷ್ಟೇ ಚಿಲ್ರೆ. ಈಗ
ನೋಟಿದ್ರೇನೆ ಕೆಲಸ ನಡೆಯೋದು.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ಅಜ್ಜೀ ನೆನಪಿಟ್ಕೋ ನಿಂಗೆ ಮನೆ ಕಟ್ಟಿಸಿಕೊಡ್ತೀವಿ. ನಮಗೆ ಓಟಾಕ್ಬೇಕು. ನಮ್ದು ಚಿಲ್ರೆ ಪಕ್ಷ. ಒಂದ್ರೂಪಾಯಿ ಕಾಯಿನ್ ನಮ್ಮ ಚಿಹ್ನೆ ನೆನಪಿಟ್ಕೋ. (ಹೋಗುವರು)
ನೋಟಿನಪಕ್ಷ: ಅಜ್ಜೀ ನಿಂಗೆ ವೃದ್ಧಾಪ್ಯವೇತನ ವಿಧವಾವೇತನ ಬರೋ ಹಂಗೆ ಮಾಡ್ತೀವಿ ನಮಗೆ ಓಟಾಕು. ನಮ್ದು ನೋಟಿನ ಪಕ್ಷ. ಒಂದರ ಮುಂದೆ ಮೂರು ಸೊನ್ನೆ.
ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ನೆನಪಿರ್ಲಿ. (ಹೋಗುವರು)
ಮುದುಕಿ: ಅಯ್ಯೋ ಮುಂಡೆಮಕ್ಳ. ತಿನ್ನೋಕೆ ಅನ್ನ ಕೊಡ್ರೋ ಅಂತ ಬೇಡಿದ್ರೆ ಆ ವೇತನ ಈವೇತನ ಅಂತೀರಲ್ಲಾ! ಥೂ ನಿಮ್ಮ ಭಂಡಬಾಳಿಗ್ ಬೆಂಕಿ ಹಾಕ.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ದೃಶ್ಯ-2.
(ಚುನಾವಣಾ ಪ್ರಚಾರ)
ಚಿಲ್ರೆ ಪಕ್ಷ: ಮಾನ್ಯ ಮತದಾರ ಬಂಧುಗಳೇ ಇದು ಚಿಲ್ರೆ ಪಕ್ಷದ ಚುನಾವಣಾ ಪ್ರಚಾರ.  ಬಂಧುಗಳೇ ನೀವಿವತ್ತು ಮಾಲ್‍ಗಳಿಗೆ ಹೋಗ್ತೀರಿ, ನಿಮಗೆ ಬೇಕ್ಬೇಕಾದ್ದನ್ನ ತಗೋತೀರಿ ಅಂತಾದ್ರೆ ಅದಕ್ಕೆ ನಮ್ಮ ಪಕ್ಷ ಕಾರಣ. ಚಿಲ್ರೆ ಸಾಮಾನಿಗಾಗಿ ಅಲೆದಾಡೋದನ್ನ ತಪ್ಪಿಸಿದ್ದೀವಿ ಎಲ್ಲಾನೂ ಒಂದೇ ಕಡೆ ಸಿಗೋ ಹಾಗೆ ಮಾಡಿದ್ದು ನಮ್ಮ ಪಕ್ಷದ ಸಾಧನೆ. ಈ ಬಾರಿ ನೀವೇನಾದರೂ ನಮ್ಮ ಪಕ್ಷಕ್ಕೆ ಬಹುಮತ ತಂದ್ಕೊಟ್ಟರೆ ನಿಮ್ಮ ಬದುಕು ಬಂಗಾರ ಮಾಡ್ತೀವಿ. ಚಿಲ್ರೆ ಚಿಲ್ರೆಯಾಗಿದ್ದ ನಿಮ್ಮ ಬದುಕು ಝಣ ಝಣ ಕಾಂಚಾಣ ಮಾಡ್ತೀವಿ.
ಬಂಧುಗಳೇ ನೆನಪಿರ್ಲಿ ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ. (ಹೋಗುವರು)
ನೋಟಿನಪಕ್ಷ: ಇದು ನೋಟಿನ ಪಕ್ಷದ ಚುನಾವಣಾ ಪ್ರಚಾರ ಬಂಧುಗಳೇ
ತಾಯಂದಿರೇ ಅಕ್ಕಂದಿರೇ ನಾವು ನಿಮಗೆ ಸೀರೆ ಕೊಡಿಸ್ತೀವಿ. ಮೈತುಂಬಾ ಸೀರೆ ಉಟ್ಕಳ್ಳಿ ಅಕ್ಕಂದಿರೇ. ನಾವು ಅಧಿಕಾರಕ್ಕೆ ಬಂದರೆ ನಿಮಗೆ ಟೀವಿ ಕೊಡಿಸ್ತೀವಿ ಮನೆ ಮನೆಗೂ ಟೀವಿ ಬಂದ್ರೆ ಹೆಂಗಸರೆಲ್ಲ ಮನೇಲೆ ಉಳಿತಾರೆ. ಹೆಂಗಸರು ಒಳಗೇ ಉಳಿದ್ರೆ ಅತ್ಯಾಚಾರಗಳು ನಡಿಯಲ್ಲ ತಾಯಂದಿರೇ. ಅದಕ್ಕೆ ನಾವು ಟೀವಿ ಕೊಡ್ತೀವಿ. ನೀವು ನಮಗೆ ಓಟು ಕೊಡಿ.
ನಿಮ್ಮ ಮಾನ ರಕ್ಷಣೆ ನಮ್ಮ ಪಕ್ಷದ ಹೊಣೆ
ನೆನಪಿರಲಿ ಅಕ್ಕಂದಿರೇ ಒಂದರ ಮುಂದೆ ಮೂರು ಸೊನ್ನೆ
ಸಾವಿರ ರೂಪಾಯಿ ನೋಟು ನಮ್ಮ ಪಕ್ಷದ ಚಿಹ್ನೆ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು(ಹೋಗುವರು)

ದೃಶ್ಯ-3.
(ಮುದುಕಿ ಭಿಕ್ಷೆ ಬೇಡುತ್ತಾ ಮನೆ ಮನೆಗೆ ಬರುವಳು)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ... ಏನಾದ್ರೂ ತಿನ್ನಾಕ ಕೊಡ್ರವ್ವಾ......
ಮನೆಯಾಕೆ1.: ಅಯ್ಯ ನಮ್ಮಟ್ಟಿ ಮೂದೇವಿ ಅದ್ಯಾನೋ ಚಿಲ್ರೆ ನೋಟು ಅಂದ್ಕಂಡು ಓಟ್ನವರ ಹಿಂದ್ಕ ಅಲಿತವ್ನ. ಹಟ್ಯಾಗ ಗೆಯ್ಯಾಕ ಹೋಗೋರೆ ಯಾರೂವಿ ಇಲ್ಲಕವ್ವ. ಹೀಂಗ ಆದ್ರ ನಾನೂವಿ ನನ್ನ ಮಕ್ಕಮರಿ ಕಟ್ಕಂಡು ನಿನ್ನಂಗ ಬೇಡಾಕ ಹೋಗ್ಬೇಕು. ಈ ವೋಟು ಯಾವಾಗಾರ ಮುಗಿತೈತೋ ಏನೋ
ಮನೆಯಾಕೆ2: ಯಾಕ ಸಾಕವ್ವಾ, ವೋಟ್ನೋರ ಹಿಂದ್ಕ ವೋದ್ರ ಅದ್ಯಾನೋ ದುಡ್ಡು ಕಾಸು
ಕೊಡೋರಂತಲ್ಲ. ಜೊತ್ಗ ವೋಟ್ಲಾಗ ಉಣ್ಣಾಕೂ ಕೊಡ್ತಾರಂತಲ್ಲವ್ವಾ? ಶಿವಣ್ಣಗ ಬರ್ತ ಕಟ್ಟಸ್ಗಂಡು ಬರಾಕೇಳು.
ಮನೆಯಾಕೆ1.: ಕಟ್ಟಸ್ಗಂಡು ಬರಾದು ಇರ್ಲಿ ಆ ಮೂದೇವಿನೇ ಹಟ್ಟಿಗ ಬರಲ್ಲ ಅಂತೀನಿ. ಚನ್ನಾಗಿ ತಿಂದು ಕುಡ್ದು ಎಲ್ಲೋ ದಾರೀಲಿ ಬೀಳ್ತಾನ. ಅದ್ಕ ಈ ವೋಟು ಯಾವಾಗಾರ ಮುಗಿತೈತೋ ಅಂತ ಕಾಯ್ತವ್ನಿ. ಎಲ್ಲಾರೂ ಕೂಲಿ ಮಾಡಾವ ಅಂದ್ರ ಮಳ ಇಲ್ದ ಯಾರ ಹಟ್ಟೀಲೂ ಗದ್ದಾಲೂ ಕೆಲಸಾನೇ ಇಲ್ಲ ಕನವ್ವ.
ಮುದುಕಿ: ಅವ್ವ ಹೊಟ್ಟಗ ಬೆಂಕಿ ಬಿದ್ದೈತ್ರವ್ವ ಸಟಗಾ ನೀರಾದ್ರೂ ಕೊಡ್ರವ್ವ. ನಡಿಯಾಕ ಸಗ್ತೀನೇ ಇಲ್ಲಕವ್ವ
ಮನೆಯಾಕೆ2: ನಮ್ಮಟ್ಟಿಯಾಗ ಚೂರು ತಂಗ್ಳವ ಕೊಡ್ತಿನಿ ಇರು (ತಂದು ಕೊಡುವಳು)
ಮುದುಕಿ: ನಿಂಗ ದೇವ್ರು ಚನ್ನಾಗಿಟ್ಟಿರ್ಲಿ.
(ಮುದುಕಿ ಮೂಲೆಯಲ್ಲಿ ಕುಳಿತು ತಿನ್ನುತ್ತಿರುವಳು. 1ನೇ ಮನೆಗೆ ಚಿಲ್ರೆ ಪಕ್ಷದವರು ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಯಾರಿದ್ದೀರಮ್ಮ ಮನೆಯಾಗೆ?
ಮನೆಯಾಕೆ1: ಮನೆಯವರು ಇದ್ದೀವಿ ಕಣಮ್ಮ. ಓ ನೀವಾ?
ಕಾರ್ಯಕರ್ತರು: ನಾವೇ ನಾವು ಚಿಲ್ರೆ ಪಕ್ಷದವರು, ಝಣ ಝಣ ಕಾಂಚಾಣದವರು.
ಮನೆಯಾಕೆ1: ಕಾಂಚಾಣದವ್ರೋ ಕಾಡುಮನಸ್ರೋ. ನೀವೇನು ಹೇಳ್ಬೇಕು ಅದ್ನ ಹೇಳ್ಬುಟ್ಟು
ಹೊಂಟೋಗಿ. ನಂಗ ಮಾಡಾಕ ಕೆಲ್ಸ ಅದ.
ಚಿನ್ನಮ್ಮ: ಹಾಗೆಲ್ಲ ಅರ್ಜೆಂಟ್ ಮಾಡಿದರೆ ಹೆಂಗಮ್ಮ? ನೋಡು ಈ ಸಲ ನೀನು ನನಗೇ
ಓಟಾಕು. ನಾನೆಲ್ಲಾದ್ರು ಗೆದ್ದು ಬಂದ್ರೆ ನಿಮಗೆ ಏನೇನು ಬೇಕೋ ಅದನ್ನ ಮಾಡಿ ಕೊಡ್ತೀನಿ.
ಕಾರ್ಯಕರ್ತರು: ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ನೋಡವ್ವ ನಿಮ್ಮ ಮನೇಲಿ ವೋಟಿನ ಲೀಸ್ಟಿಗೆ ಸೇರೋರಿದ್ರೆ ತಿಳಿಸು ನಾವೇ ಸೇರಿಸ್ತೀವಿ.
ಮನೆಯಾಕೆ1: ಮೊನ್ನೆ ಹುಟ್ಟಿದ ಮಗ ಐತೆ ಸೇರಿಸ್ಗತೀಯಾ? ನಿಂ ಕೆಲ್ಸ ಆದ್ರ ಕಡ್ದೋಗಿ.
ಚಿನ್ನಮ್ಮ: ಅಯ್ಯೋ ಹಾಗಲ್ಲ ನೋಡು ಒಂದೋಟಿಗೆ ಐನೂರು ರೂಪಾಯಿ ಕೋಡ್ತೀನಿ ಕಣವ್ವ
ಮನೆಯಾಕೆ1: ಅಯ್ಯೋ ಹೌದಾ?
ಕಾರ್ಯಕರ್ತರು: ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ಹುಂ. ತಗೋ ನಮಗೇನೇ ವೋಟಾಕ್ಬೇಕು ತಿಳೀತಾ
ಕಾರ್ಯಕರ್ತರು: ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್.
ಮನೆಯಾಕೆ1: ಆಯ್ತು ಕಣಮ್ಮ. ನಂ ಐಕ ಇನ್ನೂವಿ ಚಿಕ್ಕವು ಇಲ್ಲಂದ್ರ ನಾಕ್ಜನ ಆಗ್ತಿದ್ದೋ.
ಚಿನ್ನಮ್ಮ: ನಂ ಜನ ಹ್ಯಾಗೆ ದಾರಿಗ ಬರ್ತಾರೆ ನೋಡಿದ್ರ?
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
(ಕೂಗುತ್ತಾ ಹೋಗುವರು. 2ನೇ ಮನೆಗೆ ನೋಟಿನ ಪಕ್ಷದವರು ಬರುವರು)

ಕಾರ್ಯಕರ್ತರು: ನೋಟಿನ ಪಕ್ಷಕ್ಕೇ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಮನೆಯಾಕೆ2: ಓ ವೋಟ್ನೋರು ಬನ್ನಿ. ಈಗ ನಾವೆಲ್ಲ ಬದ್ಕಿದ್ದೋ ಅಂತ ಗೆಪ್ತಿಗೆ ಬಂತಾ?
ನಂಜುಂಡಪ್ಪ: ನೋಡಮ್ಮ ನಮ್ಮ ನೋಟಿನ ಪಕ್ಷ ಅಧಿಕಾರಕ್ಕೆ ಬಂದ್ರೆ ಕೋಟಿ ಖರ್ಚಾದ್ರೂ ಸರಿ ನಿಮ್ಗೆಲ್ಲ ಟೀವಿ ಕೊಡ್ತೀವಿ
ಮನೆಯಾಕೆ2: ಟಿವಿ ಬ್ಯಾಡಕಯ್ಯ ಉಣ್ಣಾಕ ಹಿಟ್ಟು ಗೆಯ್ಯಾಕ ಕೆಲ್ಸ ಕೊಡು
ನಂಜುಂಡಪ್ಪ: ಕೊಡ್ತೀವಿ ಕೊಡ್ತೀವಿ ನಮ್ದು ನೋಟಿನ ಪಕ್ಷ. ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ಮನಿಯಾಗೆ ಯಾರೆಲ್ಲ ಇದ್ದೀರಿ?
ಮನೆಯಾಕೆ2: ಯಾಕಪ್ಪ ಹೀಂಗೆ ಕೇಳ್ತೀರಿ? ನಮ್ಮ ಸಂಸಾರ ಅಷ್ಟೂವಿ ನಮ್ಮನಿಯಾಗೇ  
ಇರೋದು
ನಂಜುಂಡಪ್ಪ: ಹಾಗಲ್ಲ ಕಣವ್ವ ನಮ್ದು ಮರ್ಯಾದಸ್ಥರ ಪಕ್ಷ. ದೊಡ್ಡವರೆಷ್ಟು ಚಿಕ್ಕವರೆಷ್ಟು ಅಂತ?
ಮನೆಯಾಕೆ2: ಹೋ ಹಂಗೆ. ದೊಡ್ಡೋರು ಆರ್ಜನ ಐಕ ಎಂಟವೆ.
ನಂಜುಂಡಪ್ಪ: ಹಂಗಾರೆ ಈ ಆರ್ನೋಟು ಮಡಿಕ ಒಂದೋಟ್ಗ ಒಂದ ಸಾವಿರ. ನಮ್ಗೆ ಓಟಾಕ್ಬೇಕು ತಿಳೀತಾ. ನಮ್ಮ ಚಿಹ್ನೆ ಇದೇ.
ಮನೆಯಾಕೆ2: ಐಕಳಿಗೆ ಐನೂರಾರ ಕೊಡಿ ಬುದ್ಧಿ.
ನಂಜುಂಡಪ್ಪ: ನೋಡಿ ನಂ ಜನ. ಎಷ್ಟು ಕೊಟ್ರು ಸಾಕಾಗಲ್ಲ. ನಾವು ಅವರೇ ತಾನೇ!
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
(ಕೂಗುತ್ತಾ ಮುದುಕಿಯ ಬಳಿ ಬರುವರು.)
ನಂಜುಂಡಪ್ಪ: ಅಜ್ಜೀ ಅಜ್ಜೀ ನೀನು ನಮಗೆ ವೋಟಾಕ್ಬೇಕು. ನೋಡು ಸಾವಿರ ರೂಪಾಯಿ ನೋಟು ನಂ ಚಿಹ್ನೆ. ತಕಾ ಮಡಿಕೋ ಈ ನೋಟು. ಇದ್ಕೆ ಓಟಾಕು.
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು
(ಅವರು ಹೋಗಿದ್ದೇ ಚಿಲ್ರೆ ಪಕ್ಷದವರು ಮುದುಕಿಯ ಹತ್ತಿರ ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಚಿನ್ನಮ್ಮ: ಅಯ್ಯೋ ಅಯ್ಯೋ ಅಜ್ಜೀ ದಾರಿಯಲ್ಲಿ ಮಲಗೋದೆ. ಛೇ! ಛೇ! ನೀನು ನಮಗೆ ಓಟಾಕು. ನಿಂಗೆ ಮನೆ ಕಟ್ಟಸಿಕೊಡ್ತೀವಿ. ತಕ ಮಡಿಕ ಈ ಐನೂರರ ನೋಟು. ಒಂದ್ರೂಪಾಯಿ ಕಾಯಿನ್ ನಂ ಚಿಹ್ನೆ
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ.
ಮುದುಕಿ: ಅವ್ವಾ ಇದ್ನ ಮಡಿಕಂಡು ಯಾರಾದ್ರು ತಿನ್ನಾಕ ಕೊಡ್ರವ್ವ.
ನಿರೂಪಕಿ: ನೋಡಿ (ಮುದುಕಿಯನ್ನು ತೋರಿಸಿ) ಈ ಭಾರತದ ಹೊಟ್ಟೆ ಖಾಲಿ ಮಾಡಿನೇ
ನೂರಾರು ಆಸೆಗಳನ್ನು ತೋರಿಸುವ ಚುನಾವಣೆ ಬರೋದು.
ಮುದುಕಿ: ಮಗಾ, ಈ ನೋಟ್ನ ಮಡಿಕಂಡು ಏನಾದ್ರೂ ತಿನ್ನೋದು ಕೊಡು.
ನಿರೂಪಕಿ: ಈ ದುಡ್ಡನ್ನ ನಿನ್ನ ಮಕ್ಕಳಿಗೆ ಕೊಡು.
ಮುದುಕಿ: ಅಯ್ಯೋ ನಂಗೆ ಯಾರೂ ಇಲ್ಲಕವ್ವ. ಓಟಿಲ್ದ ನಂಗ ಓಟಾಕು ಅಂತಾರ ಈ
ಮುಂಡೆಮಕ್ಳು.
ನಿರೂಪಕಿ: ಅಯ್ಯೋ ನಮ್ಮ ಭಾರತವೇ, ಈ ಬಡವರ ಭಾರವ ಹೇಗೆ ಹೊರುವೆ?
(ಹಿನ್ನೆಲೆಯಲ್ಲಿ “ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಭಾರತದಲ್ಲಿ ಬಡವರ ನಿರ್ಮೂಲನೆ ಮಾಡ್ತೀವಿ”
“ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಬಡವರಿಗೆ ವಿಶೇಷ ಪ್ಯಾಕೇಜ್ ತರ್ತೀವಿ”
ನಿರೂಪಕಿ: ಇವರು ಬಡತನ ನಿರ್ಮೂಲನೆ ಮಾಡುವುದಿಲ್ಲ, ಬಡವರನ್ನೇ ನಿರ್ಮೂಲನೆ ಮಾಡುತ್ತಾರೆ. ಬಾ ಅಜ್ಜೀ ನಿಂಗೆ ತಿನ್ನೋಕೆ ಕೊಡ್ತೀನಿ.

ದೃಶ್ಯ-4
ಶಿಷ್ಯ: (ಓಡಿಬಂದು) ಸ್ವಾಮಿಗಳು ಬರುತ್ತಿದ್ದಾರೆ
ಗಬ್ಬೂರು ಗದ್ದಿಗೆ ಮಠದ
ಶ್ರೀ ಶ್ರೀ ಶ್ರೀ ಮಿಷ್ಟಿಕಾನಂದ ಮಹಾಸ್ವಾಮಿಗಳು ಬರುತ್ತಿದ್ದಾರೆ.
ಸ್ವಾಮಿ: (ಸ್ವಾಮಿಗಳು ಬಂದು) ಶಿಷ್ಯ ನಮ್ಮ ಇಂದಿನ ಕಾರ್ಯ ಕ್ರಮವೇನು?
ಶಿಷ್ಯ: ಚಿಲ್ರೆ ಪಕ್ಷ ಮತ್ತು ನೋಟಿನ ಪಕ್ಷದವರು ತಮ್ಮ ಭೇಟಿಗಾಗಿ ಕಾಯುತ್ತಿದ್ದಾರೆ.
ಸ್ವಾಮಿ: ಒಬ್ಬೊಬ್ಬರನ್ನೇ ಕರೆಯಿಸು
ಶಿಷ್ಯ: ಆಗಲಿ ಮಹಾಸ್ವಾಮಿ. ಚಿನ್ನಮ್ಮ (ಚಿನ್ನಮ್ಮ ಓಡಿ ಬಂದು ಅಡ್ಡಬಿದ್ದು)
ಚಿನ್ನಮ್ಮ: ಅಡ್ಡಬಿದ್ದೆ ಬುದ್ಧಿ. ನಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ಮಠಕ್ಕೆ ಒಂದು ಮೆಡಿಕಲ್ ಕಾಲೇಜು, ಬೆಂಗ್ಳೂರಲ್ಲಿ ಒಂದು ಮಾಲ್ ಮಾಡಿಸಿಕೊಡ್ತೀವಿ. ನಿಮ್ಮ ಸಮಾಜದವರಿಗೆ ನೀವು ತಿಳಿಸಿ ಹೇಳ್ಬೇಕು ಬುದ್ಧಿ.
ಸ್ವಾಮಿ: ನೋಡಿ ನಾವು ಮಠಕ್ಕೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ ಕಡಿಮೆ ಬೀಳುತ್ತೆ
ಚಿನ್ನಮ್ಮ: ಈಗ ತುರ್ತಿಗೆ ಅಂತ 5ಕೋಟಿ ಕೊಡ್ತೀವಿ. ಮುಂದೆ ಅಧಿಕಾರಕ್ಕೆ ಬಂದ್ಮೇಲೆ
ಎಲ್ಲಾ ನಾವೇ ಕೊಡ್ತೀವಿ ಬುದ್ಧಿ.
ಸ್ವಾಮಿ: ಆಯ್ತು ನಮ್ಮ ಕೃಪೆ ನಿಮ್ಮ ಮೇಲಿದೆ. ಹೋಗಿ ಬನ್ನಿ. (ಚಿನ್ನಮ್ಮ ಹೋಗುವಳು)
ಶಿಷ್ಯ, 25ಕೋಟಿ ಆಟ ನಡೆಯಲ್ಲ ಅನ್ಸುತ್ತೆ.
ಶಿಷ್ಯ: ಹೌದು ಬುದ್ಧಿ ಸ್ವಲ್ಪ ಕಡಿಮೆ ಮಾಡಿ.
ಸ್ವಾಮಿ: ಆಯ್ತು. 20ಕೋಟಿ?
ಶಿಷ್ಯ: ಇದೂ ಜಾಸ್ತಿನೇ ಬುದ್ಧಿ.
ಸ್ವಾಮಿ: ಹೌದಾ? ನನ್ನ ವ್ಯವಹಾರ ಜ್ಞಾನ ಇಷ್ಟು ಇಳಿದು ಹೋಗಿದೆಯೇ! 15ಕೋಟಿ?
ಶಿಷ್ಯ: ಆಗಬಹುದು ಆಡಿ ನೋಡುವಾ. ಕರೀತೇನೆ. ನಂಜುಂಡಪ್ಪಾ...        
ನಂಜುಂಡಪ್ಪ: (ಬಂದು) ಅಡ್ಡಬಿದ್ದೆ ಬುದ್ಧಿ. ನಾನು ನಿಮ್ಮ ಸಮಾಜದವನೇ
ಸ್ವಾಮಿ: ಅದು ನಮ್ಮ ಗಮನಕ್ಕೆ ಬಂದಿದೆ.
ನಂಜುಂಡಪ್ಪ: ಬುದ್ಧಿ ನಾವು ಅಧಿಕಾರಕ್ಕೆ ಬಂದ್ರೆ ನಿಮ್ಮ ಕಣ್ಣು ಬಿದ್ದಿರುವ ಜಾಗನೆಲ್ಲಾ
ಡಿನೋಟಿಫಿಕೇಷನ್ ಮಾಡಿಕೊಡ್ತೀವಿ. ಆಮೇಲೆ.....
ಸ್ವಾಮಿ: ನಾವೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ
ಶಿಷ್ಯ: 15ಕೋಟಿ
ಸ್ವಾಮಿ: ಹಾಂ. ಹೌದು 15ಕೋಟಿ ಕಡಿಮೆ ಬೀಳುತ್ತೆ.
ನಂಜುಂಡಪ್ಪ: ಈಗ ತುರ್ತಿಗೆ ಅಂತ ಪಾರ್ಟಿಯಿಂದ 10ಕೋಟಿ ಕೋಡ್ತೀವಿ ಆದರೆ ಓಟೂ...
ಸ್ವಾಮಿ: (ತಟ್ಟನೆ ನಿಂತು) ಆಗಲಿ ನಮ್ಮ ಸಂಪೂರ್ಣ ಕೃಪೆ ನಿಮ್ಮ ಮೇಲಿದೆ ಹೋಗಿ ಬನ್ನಿ.
(ನಂಜುಂಡಪ್ಪ ಹೋಗುವನು.)
ಸ್ವಾಮಿ: ಶಿಷ್ಯ ಇಂದು ನಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಬಪ್ಪರೆ 15ಕೋಟಿ
ಸಂಪಾದನೆ.
ಶಿಷ್ಯ: ಬುದ್ಧೀ ಕೊಳ್ತೂರಲ್ಲಿ 25 ಜೋಡಿ ಸಾಮೂಹಿಕ ವಿವಾಹ ನೀವೇ ಮಾಡ್ತೀನಿ...
ಸ್ವಾಮಿ: ಮದುವೆ ನೀನೇ ಮಾಡಿಸು. ನಮಗೆ ವಿಶ್ರಾಂತಿ ಬೇಕಿದೆ.            
(ಹೋಗುವನು, ಹಿಂದೆಯೇ ಶಿಷ್ಯ ಹೋಗುವನು.)

ದೃಶ್ಯ-5
(ನಿರೂಪಕಿ ಹಾಡುತ್ತಾ ಬರುವಳು)
ಹಾಡು: ಹಣವೂ ಹೆಂಡ ಕಂಡದ ಜೊತೆಯಲಿ
ಬರುವುದು ನಮ್ಮಯ ಚುನಾವಣೆ
ಋಣದಲಿ ಬಿದ್ದು ನಮ್ಮಯ ಜನತೆ
ಮಾರಿಕೊಳ್ಳುವರು ಮತವನ್ನೆ!!

ಕಳ್ಳ ಬಂದರೂ ವೋಟ ಕೊಡುವರು
ಸೀಟು ಇಡುವರು ಸುಳ್ಳರಿಗೂ
ಮಳ್ಳ ಜನಗಳು ಮತವನು ಮಾರಿ
ಐದು ವರ್ಷಗಳು ಮರುಗುವರು.

ನಿರೂಪಕಿ :ನಮ್ಮ ದೇಶದಲ್ಲಿ ಇಂದು ಚುನಾವಣೆ ಒಂದು ಉದ್ಯಮದಂತೆ ಬೆಳೆದಿದೆ.
ಚುನಾವಣಾ ಸಮಯದಲ್ಲಿ ಬಂಡವಾಳ ಹಾಕಿ ಗೆದ್ದು ಬಂದು ಲಾಭ
ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಜೈಲಿನಲ್ಲಿದ್ದೂ ಗೆಲ್ಲುತ್ತಾರೆಂದರೆ, ಅದು
ವ್ಯಕ್ತಿಯ ವರ್ಚಸ್ಸಲ್ಲ ಹಣದ ಪ್ರಭಾವ. ಗೆಲ್ಲುವುದಕ್ಕಾಗಿ ಹಣದ ಹೊಳೆಯನ್ನೇ
ಹರಿಸುತ್ತಾರೆ, ಗೆದ್ದು ಭ್ರಷ್ಟಾಚಾರ ಮಾಡುತ್ತಾರೆ.

(ಬೇರೆ ಬೇರೆ ಪಕ್ಷದವರು ಪ್ರಚಾರ ಮಾಡುತ್ತಾ ಓಡಾಡುತ್ತಾರೆ. ನಾನಾ ತರಹದ ಆಮಿಷಗಳು ಕೇಳಿ ಬರುತ್ತವೆ.)
ಹಾಡು :ಝಣ ಝಣ ಚುನಾವಣೆ
ಹಣ ಹಣ ಚಿತಾವಣೆ
ದುಡ್ಡಿಗುಂಟು ಓಟು
ಮುಗ್ಧ ಜನಗಳಿಗೇಟು


No comments:

Post a Comment