Saturday, September 12, 2015








ಪ್ಲಾಸ್ಟಿಕ್ ಭೂತ
ಪರಿಸರ ಜಾಗೃತಿಗಾಗಿ ನಂಜನಗೂಡು ತಾಲೂಕು 
ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳ ನಾಟಕ

ರಚನೆ: ಸಂತೋಷ ಗುಡ್ಡಿಯಂಗಡಿ




ಸಲಹೆ ಮಾರ್ಗದರ್ಶನ: ಶ್ರೀ ನಾಗೇಶ ಹೆಗಡೆ, ವಿಜ್ಞಾನ ಬರಹಗಾರರು ಬೆಂಗಳೂರು
ವಂದನೆಗಳು: “ಒಂದೂರಿನಲ್ಲಿ” ಎಂಬ ತಮ್ಮ ಕವನ ಬಳಸಿಕೊಳ್ಳಲು ಅನುಮತಿ ನೀಡಿದ  
ಕವಿ ಶ್ರೀ ಜಿ.ಪಿ.ಬಸವರಾಜು, ಮಯ್ಸೂರು






ಪಾತ್ರಗಳು:
ಸೂತ್ರಧಾರರು
ಪ್ಲಾಸ್ಟಿಕ್ ರಾಕ್ಷಸ
ಮುದುಕ
ಹುಡುಗ 1
ಹುಡುಗ 2
ಹುಡುಗ 3
ಹಕ್ಕಿ ಮರಿ
ವಿಜ್ಞಾನಿ 1
ವಿಜ್ಞಾನಿ 2
ವಿಜ್ಞಾನಿ 3
ಹೆಂಗಸು
ಗಂಡಸು
ಆತ್ಮಗಳು
ಮೊದಲನೇ ಪ್ರದರ್ಶನದಲ್ಲಿ ಪಾತ್ರವಹಿಸಿದ ಮಕ್ಕಳು:
ರೋಹಿತ್ ಕುಮಾರ್ ಹೆಚ್. ಎಂ.
ಸಂದೇಶ ಹೆಚ್. ಎಂ.
ಮಹದೇವ ಸ್ವಾಮಿ ಹೆಚ್. ಎನ್.
ಅಮೃತ ಹೆಚ್. ಎಸ್.
ಮಮತಾ ಹೆಚ್. ಎನ್.
ಆಶಾ ಹೆಚ್. ಹೆಚ್.
ಸಂಜನಾ ಹೆಚ್. ಆರ್.
ರಾಕೇಶ ವಿ.

ಹಿನ್ನೆಲೆ ಸಂಗೀತಗಾರರು:
ಮಂಜುಳ ಬಿ. ಎಸ್.
ಮಾಲತಿ ಹೆಚ್. ಎನ್.
ಪ್ರಿಯಾಂಕ ಎಸ್.
ಪ್ರತಿಮಾ ಬಿ. ಎಸ್.
ಕಾವ್ಯ ಬಿ. ಎನ್.
ಮನುಕುಮಾರ್ ಹೆಚ್. ಆರ್.

ಹಾಡು:
ಗಿಳಿಯು ಪಂಜರದೊಳಿಲ್ಲ | ರಾಮ
ಗಿಳಿಯು ಪಂಜರದೊಳಿಲ್ಲ ||
ಅಕ್ಕ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ||
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೋ......
ಗಿಳಿಯು ಪಂಜರದೊಳಿಲ್ಲ | ರಾಮ
ಗಿಳಿಯು...
(ಹಾಡು ನಡೆಯುತ್ತಿರುವಾಗ ಮುದುಕನೊಬ್ಬ ನಿಧಾನವಾಗಿ ರಂಗದ ಮೇಲೆ ಬರುವನು. ಹಿನ್ನೆಲೆಯಲ್ಲಿ “ಕಲಾ ಪ್ರೇಕ್ಷಕರೇ...., ಕಲಾ ಬಾಂಧವರೇ...., ಕಲಾ ರಸಿಕರೇ....,” ಎಂಬ ದನಿ ಜೋರಾಗಿ ಕೇಳುವುದು. ಅದರ ಬೆನ್ನಲ್ಲೇ ಹುಡುಗರಿಬ್ಬರು ಓಡುತ್ತಾ ಬರುವರು.)
ಸೂತ್ರಧಾರ(1): ಅಯ್ಯಾ ಕಲಾಭಿಮಾನಿಗಳೇ
ಒಂದೂರಿನಲ್ಲಿ ಒಂದಾನೆಯಿತ್ತು
ಒಂದು ಒಂಟೆಯಿತ್ತು ಒಂದು ಕುದುರೆಯಿತ್ತು
ಒಂದು ಕತ್ತೆಯಿತ್ತು ಒಂದು ನಾಯಿಯಿತ್ತು
ಒಂದೂರಿನಲ್ಲಿ
ಸೂತ್ರಧಾರ (2): ಅಯ್ಯಾ ಸಹೃದಯರೇ,
ಒಂದೂರಿನಲ್ಲಿ ಒಂದು ಬೆಟ್ಟವಿತ್ತು
ಒಂದು ನದಿಯಿತ್ತು ಒಂದು ಕಾಡಿತ್ತು
ಪ್ರಾಣಿಪಕ್ಷಿಗಳಿದ್ದವು....
ಒಂದೂರಿನಲ್ಲಿ
ಮುದುಕ: ಹೌದು ಮಗು ನಿನ್ನಿಂದ ನಾನೀಗ ಈ
ಕತೆಯನ್ನು ಕಲಿಯಬೇಕು
ಸೂತ್ರಧಾರ (1): ಅಯ್ಯಾ ತಾತಪ್ಪ ಕೇಳು,
ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ
ಅವನ ಬಳಿ ಬಿಲ್ಲು ಬಾಣಗಳಿದ್ದವು
ಕತ್ತಿ ಗುರಾಣಿಗಳಿದ್ದವು ಮತ್ತೆ ಯಂತ್ರ
ಮಂತ್ರ ತಂತ್ರಗಳೂ ಇದ್ದವು
ಒಂದೂರಿನಲ್ಲಿ
ಸೂತ್ರಧಾರ (2): ಒಂದು ದಿನ ಅವನು ಬಿಲ್ಲಿಂದ ಒಂದು
ಹಕ್ಕಿಯ ಕೊಂದ, ತಿಂದ; ಮತ್ತೆ ಒಂದೊಂದೇ
ಪ್ರಾಣಿಗಳ ಕೊಂದ ತಿಂದ
ಒಂದೂರಿನಲ್ಲಿ
ಮುದುಕ: ಹೌದು ಮಗು ನಿನ್ನಿಂದ ನಾನೀಗ ಈ ಕತೆಯನ್ನು ಕಲಿಯಬೇಕು
ಸೂತ್ರಧಾರರಿಬ್ಬರೂ: ಅಯ್ಯಾ ಬುದ್ಧಿವಂತ ಕಲಾ ರಸಿಕರೇ....
“ಆ ಮನುಷ್ಯನ ಹಸಿವು ತೀರಲೇ ಇಲ್ಲ”
(ಹಿನ್ನೆಲೆಯಲ್ಲಿ ಘೋರವಾದ ಕೂಗು ಕೇಳುವುದು. ಆ ಅಬ್ಬರಕ್ಕೆ ಹುಡುಗರಿಬ್ಬರೂ ಅಂಜಿ ಓಡಿ ಹೋಗುವರು. ಪ್ಲಾಸ್ಟಿಕ್ ರಾಕ್ಷಸ ಲಯ ಬದ್ಧವಾಗಿ ಹೆಜ್ಜೆ ಹಾಕುತ್ತಾ ಬರುವನು. ಮುದುಕ ಅಲ್ಲೆ ಮರೆಗೆ ನಿಂತು ನೋಡುವನು.)
ಪ್ಲಾಸ್ಟಿಕ್ ರಾಕ್ಷಸ: ಎಲವೋ.........
ಬುದ್ಧಿವಂತರೇ, ಬುದ್ಧಿವಿಹೀನರೇ
ಮುದ್ದುಗಳೇ, ಬುದ್ದುಗಳೇ ನಾನ್ಯಾರೆಂದು ಬಲ್ಲಿರಾ?
ನಾನು...... ನಾನು...... ಯಾರೆಂದೂ......ಹೇಳುವುದಿಲ್ಲ.
ನೀವೇ ಅರಿತುಕೊಳ್ಳಿ. ನಿಮ್ಮ ವೈಭೋಗ ನಿಮ್ಮ ದುರಾಸೆಯೇ ನನ್ನ ಜನನಕ್ಕೆ ಕಾರಣ.ದುಷ್ಟ ಮಾನವರೇ... ಛೇ|| ಹಾಗನ್ನಬಾರದು
ನನ್ನ ಹುಟ್ಟಿಗೆ ಕಾರಣರಾದ ಜನಕರೇ, ನಿಮ್ಮಷ್ಟು ಇತಿಹಾಸ ನನಗಿಲ್ಲ. ಆದರೆ,ನಿಮ್ಮ ಭವಿಷ್ಯ ಘೋರವಾಗಬಲ್ಲಷ್ಟು ನನಗೊಳ್ಳೆಯ ಭವಿಷ್ಯವಿದೆ.
ನಿಮ್ಮ ಬದುಕಿನ ತುಂಬಾ ಪಾಲು ನೀಡಿದ ನಿಮಗೆ ವಂದನೆಗಳು
ಮುದುಕ: ಅಯ್ಯಾ ನೀನ್ಯಾರು?
ಪ್ಲಾಸ್ಟಿಕ್ ರಾಕ್ಷಸ: ಯಾರದು? ಓ ಮುದುಕನೋ ನಾನ್ಯಾರೆಂದು ನೀನು ತಿಳಿಯುವುದು ಬೇಡ.
ಮುದುಕ: ಎಲ್ಲಿಯವನು ನೀನು?
ಪ್ಲಾಸ್ಟಿಕ್ ರಾಕ್ಷಸ: ನಿಮ್ಮವನೆ. ನಿಮ್ಮ ಮನೆಯ ಮಗ ನಿಮ್ಮ ಮಗು ತಿನ್ನುವ ತಿಂಡಿ, ಕುಡಿಯುವ ಜ್ಯೂಸು,ಮನೆಯೊಳಗಿನ ಸಾಮಾನು, ಎ.ಸಿ., ಟಿವಿ, ಫ್ರಿಜ್ಜು, ಪೆನ್ನು, ಮೊಬಯ್ಲು ಎಲ್ಲ ಎಲ್ಲಾ ಕಡೆ ನಾನಿದ್ದೀನಿ
ಮುದುಕ: ನಿನಗೇನು ಬೇಕಪ್ಪಾ?
ಪ್ಲಾಸ್ಟಿಕ್ ರಾಕ್ಷಸ: ಬಲಿ ಬೇಕು ಬಲಿ. ಕೊಡುವೆಯಾ?
ಮುದುಕ: ಅಯ್ಯೋ ಪಾಪಿ ನಿನಗೆ ಬಲಿ ಬೇಕಾ. ಈ ಕೋಲು ನೋಡು
ಇದರಿಂದ ಬಡಿದು ನಿನ್ನ ಬಲಿ ತೆಗೆಯುತ್ತೇನೆ.
ಪ್ಲಾಸ್ಟಿಕ್ ರಾಕ್ಷಸ: ಪಾಪಿ ಮುದುಕ ನನಗೇ ಹೆದರಿಸುವೆಯಾ? ನನ್ನ ಶಕ್ತಿ ನೋಡು.
(ಪ್ಲಾಸ್ಟಿಕ್ ರಾಕ್ಷಸ ಮುದುಕನ ಸುತ್ತ ಗಾಳಿಯೂದುವನು. ಮುದುಕ “ನನಗೆ ಉಸಿರಾಡಲು ಆಗುತ್ತಿಲ್ಲ” ಎನ್ನುತ್ತಾ ಬಿದ್ದು ಹೋಗುವನು. ಪ್ಲಾಸ್ಟಿಕ್ ರಾಕ್ಷಸ ಅದನ್ನು ನೋಡಿ ನಗುತ್ತಿರುವಾಗ, ದೂರದಲ್ಲಿ ಮಕ್ಕಳು ಹಾಡುತ್ತಾ ಬರುವುದು ಕೇಳಿಸಿ ಮರೆಯಾಗುವನು)

ಹಿನ್ನೆಲೆ ಹಾಡು: ಚಟ್ ಪಟ್ ಚಂಗ್ಯಾ
ಚಂಯ್ ಪಂಯ್ ಮಂಗ್ಯಾ
ಬೂಟು ಟೊಪ್ಪಿಗೆ ಹಾಕ್ಕೊ
ಮಡ್ಡಮ್ಮನ ಕೈ ಹಿಡ್ಕೋ.....
(ಮೂವರು ಮಕ್ಕಳು ಆಡುತ್ತಾ ಬರುವರು. ಅವರ ಕಯ್ಗಳಲ್ಲಿ ಲಾಲಿಪಾಪ್ ಇದೆ. ಅದನ್ನು ನೋಡುತ್ತಾ ಬಂದವರಿಗೆ ಬಿದ್ದಿರುವ ಮುದುಕ ಕಾಣಿಸುತ್ತಾನೆ. ಅವನ ಸುತ್ತಲೂ ನೆರೆದು)
ಅಮೃತ: ಡೇ, ನೋಡುಡಾ ತಾತ ಮಲ್ಗವನೆ.
ಮಾದೇವ ಸ್ವಾಮಿ: ಅದ್ಯಾಕುಡಾ ಇಲ್ಲಿ ಮಲ್ಗವನೆ?
ಮಮತ: ನಿನ್ನೆ ಚನ್ನಾಗಿ ಕುಡ್ದಿರಬೇಕು ಕಯ್ಯಾ, ಇನ್ನೂವಿ ಗ್ಯಾನನೇ
ಬಂದಿಲ್ಲಕುಡಾ. ತಾತೋ.. ಬೆಳ್ಗಾತುಕಯ್ಯಾ ಎದ್ದೇಳು.
(ಅಮೃತ ಮುದುಕನನ್ನು ಅಲುಗಾಡಿಸುವಳು. ಮುದುಕ ಏಳುವುದಿಲ್ಲ.)
ಮಾದೇವ ಸ್ವಾಮಿ: ಅಮೃತ ನೀರ್ತಂದು ಮುಕಕ್ಕ ಹಾಕಿದ್ರ ಎದ್ದೇಳ್ತಾನ ತಕ್ಕ
(ಓಡಿ ನೀರು ತಂದು ಮುದುಕನಿಗೆ ಸಿಂಪಡಿಸುವಳು, ಮುದುಕ ನಿಧಾನ ಅಲುಗಾಡಿ ಏಳುವನು. ಸುತ್ತಲೂ ನೋಡುವನು ರಾಕ್ಷಸನಿಗಾಗಿ. ಅವನು ಹುಡುಕುವುದನ್ನು ಕಂಡು)
ಮಮತ: ಅದ್ಯಾಕಜ್ಜ ಹಂಗೆ ನೋಡ್ದಯಿ, ಭೂತ ಬಂದಿದ್ದಾ ನಿನ್ನ ಕನಸಾಗೆ
ಮುದುಕ: ಎಲ್ಲಿ ಹೋದ ಅವನು.
ಮಾದೇವ ಸ್ವಾಮಿ: ಇಲ್ಲವ್ನಿ ಕಯ್ಯೋ
ಅಮೃತ: ಯಾರಜ್ಜ?
ಮಮತ: ಭೂ.....ತ ಅಲ್ವಜ್ಜಾ?
ಮುದುಕ: ಹೂಂ ಭೂತ. ಅವನು ಗಾಳಿಯೂದಿದ್ದೆ ನಾನು ಬಿದ್ದೋದೆ.
ಮಾದೇವ ಸ್ವಾಮಿ: ಪುರ್ ಪುರ್ ಅಂತ ಗಾಳಿ ಹಾಕಿದ್ನಾ ಭೂತಪ್ಪ. (ನಗುವರು)
ಅಮೃತ: ಅವನನ್ನು ನೀನು ನಿಜವಾಗ್ಲೂ ಕಂಡೆಯಾ?
ಮುದುಕ: ಹೌದು ಮಗು ಕಂಡೆ. ಭಯಂಕರವಾಗಿದ್ದ. ನಾನು ನಿಮ್ಮ
ಮನೆಯ ಮಗ ಅಂದ. ಮಕ್ಕಳು ತಿನ್ನುವ ತಿಂಡಿ, ಜ್ಯೂಸು
ಎಲ್ಲಾ ಕಡೆ ನಾನಿದ್ದೀನಿ ಅಂದ.
ಮಾದೇವ ಸ್ವಾಮಿ: ನನ್ನ ಹತ್ರವಿ ತಿಂಡಿ ಅದ. ಆದ್ರ ಭೂತಪ್ಪ ಇಲ್ವಲ್ಲ ಅಜ್ಜ!
ಮುದುಕ: ಅದೆ ನನಗೂ ಅರ್ಥವಾಗಿಲ್ಲ.
ಮಮತ: ಬಿಡಕಯ್ಯ ತಾತ ಕನಸು ಕಂಡು ಬೆಚ್ಗಂಡನ. ನಾನು ಲಾಲಿಪಾಪ್ ತಿಂತೀನಿ.
(ಮೂವರೂ ಲಾಲಿಪಾಪ್‍ಗೆ ಸುತ್ತಿದ್ದ ಪ್ಲಾಸ್ಟಿಕ್ ಕವರನ್ನು ತೆಗೆದು ಎಸೆದು, ತಿನ್ನುವರು)
ಮಾದೇವ ಸ್ವಾಮಿ: ನಿಂಗೂ ಬೇಕಾ ತಾತ?
ಮಮತ: ಅವಗ ಸಾರಾಯಿ ಇದ್ರ ಬೇಕು ಅಲ್ವಾ ಅಜ್ಜಾ? (ಮುದುಕ ನಗುವನು)
ಅಮೃತ: ಅಜ್ಜ ನಿಂಗೊಂದು ಮ್ಯಾಜಿಕ್ ತೋರಿಸ್ತೀನಿ ನೋಡ್ಕ
(ಅವನು ಅಲ್ಲಿ ಎಸೆದಿದ್ದ ಕವರುಗಳಿಗೆ ಬೆಂಕಿ ಹಚ್ಚುವನು ಅದರಿಂದ ಬಣ್ಣದ ಬೆಂಕಿ ಬರುವುದು)
ಅಮೃತ: ನೋಡ್ಕ ತಾತೋ ಬಣ್ಣದ ಬೆಂಕಿ
ಮಕ್ಕಳು ಹಾಡುವರು: ಚಟ್ ಪಟ್ ಚಂಗ್ಯಾ
ಚಂಯ್ ಪಂಯ್ ಮಂಗ್ಯಾ
ಬೂಟು ಟೊಪ್ಪಿಗೆ ಹಾಕ್ಕೊ
ಮಡ್ಡಮ್ಮನ ಕೈ ಹಿಡ್ಕೋ.....
(ಪ್ಲಾಸ್ಟಿಕ್ ರಾಕ್ಷಸ ಬರುವನು. ಮಕ್ಕಳು ಹೆದರಿ ಓಡುವರು.ಅವರು ಓಡಿದನ್ನು ನೋಡಿ ರಾಕ್ಷಸ ನಗುವನು. ನಗುತ್ತಾ ಹೋಗುವನು.)
ಹೊಸ ದೃಶ್ಯ
(ಹಕ್ಕಿಮರಿಯೊಂದು ಕುಂಟುತ್ತಾ ಹಾಡುತ್ತಾ ಬರುವುದು.)
ಹಾಡು: ಹಕ್ಕಿ ಬಂತೊಂದ್ ಹಕ್ಕಿ
ಮಯ್ಮೇಲೆಲ್ಲಾ ಚುಕ್ಕಿ
ಕುಂಟುತಾ ಬಂದ ಹಕ್ಕಿ
ಹಾರದು ರೆಕ್ಕೆಯ ಬಿಚ್ಚಿ
(ಒಡನೆಯೇ ಬೇಟೆಗಾರ ಬಂದೂಕು ಹಿಡಿದುಕೊಂಡು ನಿಧಾನ ಬರುವನು. ಅವನು ಹಕ್ಕಿಯ ಬೇಟೆಯಾಡಲು ಮುಂದಾದಾಗ ಪ್ಲಾಸ್ಟಿಕ್ ರಾಕ್ಷಸ ಕೈ ಹಿಡಿದುಕೊಳ್ಳುವನು.)
ಬೇಟೆಗಾರ: ಬಿಡು ಬಿಡು ಕೈ ನೋಯ್ತದೆ. ಬಿಟ್ರೆ ಹಕ್ಕಿ ಹಾರಿ ಹೋಯ್ತದೆ.
ಪ್ಲಾಸ್ಟಿಕ್ ರಾಕ್ಷಸ: ನೀನ್ಯಾಕೆ ಹಕ್ಕಿಯನ್ನು ಕೊಲ್ಲಬೇಕು?
ಬೇಟೆಗಾರ: ಕೈ ಬಿಡು ಹೇಳ್ತಿನಿ.
ಪ್ಲಾಸ್ಟಿಕ್ ರಾಕ್ಷಸ: (ಕೈ ಬಿಟ್ಟು) ಹೇಳು.
ಬೇಟೆಗಾರ: ಯಾಕೆಂದರೆ ಯಾಕೆಂದರೆ ಅದನ್ನು ನಾನು ತಿನ್ನಬೇಕು.
ಪ್ಲಾಸ್ಟಿಕ್ ರಾಕ್ಷಸ: ನಾನು ಬಿಡುವುದಿಲ್ಲ
ಬೇಟೆಗಾರ: (ಬಂದೂಕು ತೋರಿಸಿ) ಇದೇನು ಗೊತ್ತಾ?
ಪ್ಲಾಸ್ಟಿಕ್ ರಾಕ್ಷಸ: ಅಯ್ಯೋ ಪೆದ್ದ, ನಾನ್ಯಾರು ಗೊತ್ತಾ ಸುಟ್ಟರೂ ಸಾಯದವ.
ಕೊಲ್ಲುವೆಯಾ? ನೀನು ನನ್ನ ಕೊಂದರೆ ಅದು ನಿನ್ನದೇ ಸಾವು.
(ಪ್ಲಾಸ್ಟಿಕ್ ರಾಕ್ಷಸ ಬೇಟೆಗಾರನನ್ನು ಹಿಡಿದು ಅವನ ಮೇಲೆ ವಿಷಗಾಳಿ ಪ್ರಯೋಗಿಸುತ್ತಾನೆ. ಬೇಟೆಗಾರ ಉಸಿರಾಡಲು ಆಗದೆ ಕೂಗುತ್ತಾ ಓಡಿ ಹೋಗುವನು. ಹಕ್ಕಿಯೂ ಉಸಿರಾಡಲು ಆಗದೆ ಒದ್ದಾಡುವುದನ್ನು ಕಂಡು)
ಪ್ಲಾಸ್ಟಿಕ್ ರಾಕ್ಷಸ: ಅಯ್ಯೋ ಹಕ್ಕಿಮರಿ, ಕೋಪದ ಭರದಲ್ಲಿ ನಾನು ವಿಷಕಾರಿ
ಎಂಬುದನ್ನೇ ಮರೆತುಬಿಟ್ಟೆ. ಕ್ಷಮಿಸಿಬಿಡು.
ಹಕ್ಕಿಮರಿ: ಕ್ಷಮಿಸಬೇಕಾದ್ದು ನಾನಲ್ಲ ಭೂತ; ಇಡೀಯ ಜೀವಸಂಕುಲ.
ನೋಡು ನಿನ್ನ ವಿರುದ್ಧ ಅದೆಷ್ಟು ಕೂಗು ಕೇಳಿಸುತ್ತಿದೆ.
(ಹಿನ್ನೆಲೆಯಲ್ಲಿ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಘೋಷಣೆ ಕೇಳುವುದು)
ಪ್ಲಾಸ್ಟಿಕ್ ರಾಕ್ಷಸ: ಹೌದು ಹಕ್ಕಿಮರಿ, ಇತ್ತೀಚಿನ ದಿನಗಳಲ್ಲಿ ನಾನಿಂತಹ
ಕೂಗುಗಳನ್ನು ಕೇಳುತ್ತಲೇ ಇದ್ದೇನೆ. ನನಗೆ ಈ ಮದುಕು
ಸಾಕಾಗಿ ಹೋಗಿದೆ. ಸಾಯಬೇಕೆಂದರೂ ಸಾಧ್ಯವಾಗುತ್ತಿಲ್ಲ.
ಹಕ್ಕಿಮರಿ: ಸಾಯುವ ಮಾತಲ್ಲ ಮಿತ್ರ. ನೀನು ಈ ಪರಿಸರದ ಸ್ನೇಹಿತನಾಗಬೇಕು.
ಪ್ಲಾಸ್ಟಿಕ್ ರಾಕ್ಷಸ: ಆದರೆ ಹೇಗೆ? ಚಿಕ್ಕ ಮಗುವೂ ಹೇಳುತ್ತದೆ ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕಗಳಿಂದ ತಯಾರಾಗುತ್ತದೆ ಎಂದು. ಆದರೆ ಅದೇ ಮಗು ಪ್ಲಾಸ್ಟಿಕ್‍ನಲ್ಲಿ ಸುತ್ತಿಟ್ಟ ತಿಂಡಿಯನ್ನೇ ಇಷ್ಟಪಡುತ್ತದೆ ಹಕ್ಕಿಮರಿ.
ಹಕ್ಕಿಮರಿ: ಹೌದು ಈ ಮಾನವರಿಗೆ ದುರಾಸೆಯೇ ಹೆಚ್ಚು. ಇನ್ನೊಬ್ಬರ
ಬಗ್ಗೆ ಯೋಚಿಸುವುದೇ ಇಲ್ಲ.
ಪ್ಲಾಸ್ಟಿಕ್ ರಾಕ್ಷಸ: ಇನ್ನೊಬ್ಬರ ಬಗ್ಗೆ ಯಾಕೆ ನನ್ನ ಬಗ್ಗಯೇ ಯೋಚಿಸುವುದಿಲ್ಲ.
ನಾನು ವಿಷಕಾರಿ ಎಂದು ಗೊತ್ತಿದ್ದರೂ ಹೆಚ್ಚು ಹೆಚ್ಚು ಉತ್ಪಾದಿಸುತ್ತಾರೆ;
ಎಲ್ಲೆಂದರಲ್ಲಿ ಎಸೆಯುತ್ತಾರೆ; ಮತ್ತೆ ಸುಟ್ಟು ಹಾಕುತ್ತಾರೆ.
ಹಕ್ಕಿಮರಿ: ಮನುಷ್ಯ ಏನೇ ಅನಾಹುತಗಳನ್ನು ಸೃಷ್ಠಿಸಿದರೂ ಬಲಿಯಾಗುವವರು ಮಾತ್ರ ನಾವುಗಳು.
ಪ್ಲಾಸ್ಟಿಕ್ ರಾಕ್ಷಸ: ನಾನೂ ಬಲಿಯಾಗಬೇಕು. ಇಲ್ಲವೆ ನಿಮ್ಮೆಲ್ಲರ ಪ್ರೀತಿಗೆ
ಪಾತ್ರನಾಗಬೇಕು. ಈ ಪರಿಸರದ ಮಿತ್ರನಾಗಬೇಕು. ಮಾನವರೇ ನನ್ನನ್ನು ಬದಲಾಯಿಸಿ ಇಲ್ಲವೇ ನಿಮ್ಮ ಅಂತ್ಯಕ್ಕೆ ಸಿದ್ಧರಾಗಿ.
(ಹಕ್ಕಿಮರಿ ಮತ್ತು ರಾಕ್ಷಸ ನಿರ್ಗಮಿಸುವರು)
ಹೊಸ ದೃಶ್ಯ
(ಇಬ್ಬರು ವಿಜ್ಞಾನಿಗಳು ಬಹಳ ಗಂಭೀರವಾಗಿ ಯೋಚನೆ ಮಾಡುತ್ತಾ ಬರುವರು.)
ವಿಜ್ಞಾನಿ (1): ಈ ಪ್ಲಾಸ್ಟಿಕ್ ಸುಟ್ಟರೂ ಅಪಾಯ
ವಿಜ್ಞಾನಿ (2): ಬಿಟ್ಟರೂ ಅಪಾಯ
(ಮತ್ತೆ ಯೋಚಿಸುತ್ತಾ ನಡೆಯುವರು, ಮತ್ತೆ ನಿಂತು)
ವಿಜ್ಞಾನಿ (1): ನೋಡಿ ಈ ಪ್ಲಾಸ್ಟಿಕ್ ಕೊಳೆಯದ ವಸ್ತು ಮತ್ತು ಮಣ್ಣಿನೊಂದಿಗೂ ಸೇರುವುದಿಲ್ಲ. ಅದು ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಮುಖ್ಯವೋ... ಹಾಗೆಯೇ ಅದು ಈ ಪರಿಸರಕ್ಕೆ ಅಷ್ಟೇ ಅಪಾಯಕಾರಿ.
ವಿಜ್ಞಾನಿ (2): ಪರಿಸರಕ್ಕೆ ಅಷ್ಟೇ ಅಲ್ಲ, ಸುಟ್ಟರೆ ಅದರಲ್ಲಿ ತಿನ್ನುವ
ಪದಾರ್ಥಗಳನ್ನು ಸುತ್ತಿಟ್ಟರೆ ಅದೂ ಅಪಾಯಕಾರಿ.
(ಮಕ್ಕಳಿಬ್ಬರೂ ಕುರ್ಕುರೆ ತಿನ್ನುತ್ತಾ ಸಿನಿಮಾ ಹಾಡು ಹಾಡುತ್ತಾ ಬಂದು ಕವರುಗಳನ್ನು ಎಸೆದು ಹೋಗುವರು. ವಿಜ್ಞಾನಿಗಳು ಮಕ್ಕಳನ್ನು ಹಿಂಬಾಲಿಸುವರು.)
ಹೊಸ ದೃಶ್ಯ
(ಆತ್ಮಗಳು ಕಯ್ಯಲ್ಲಿ ಗೊಂಬೆಗಳನ್ನು ಹಿಡಿದು ನಿದ್ದೆಯಲ್ಲಿ ನಡೆಯುವಂತೆ ಬರುವರು
ಜೋಗುಳದ ಹಾಡು ಹಿನ್ನೆಲೆಯಲ್ಲಿ ಕೇಳಿಸುವುದು.)
ಆತ್ಮ (1) ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ
ಆ ಮನುಷ್ಯನ ಹಸಿವು ತೀರಲೇ ಇಲ್ಲ
ಪ್ರಾಣಿ ಪಕ್ಷಿ ಗಿಡ ಮರ ಗುಡ್ಡ ಬೆಟ್ಟ
ಎಲ್ಲವನ್ನೂ ತಿಂದ; ನದಿ ಕೆರೆ ಕೊಳ
ಸಮುದ್ರಗಳ ನೀರನ್ನೆಲ್ಲ ಕುಡಿದು
ಖಾಲಿ ಮಾಡಿದ; ನೆಲ ಬಗೆದ
ಮಣ್ಣು ಕಲ್ಲು ಕಲ್ಲಿದ್ದಲು ಕಬ್ಬಿಣ
ಎಲ್ಲವನ್ನೂ ಅಗಿದಗಿದು ಉಗಿದ
ಒಂದೂರಿನಲ್ಲಿ...
(ಮತ್ತೆ ಜೋಗುಳದ ಹಾಡು)
ಆತ್ಮ(2) ಆ ಮನುಷ್ಯ ಆಕಾಶಕ್ಕೆ ಕೈಚಾಚಿದ
ಪಾತಾಳಕ್ಕೆ ಕೈಚಾಚಿದ, ಭೂಮಂಡಲವನ್ನೆ
ದೋಚಿದ, ನಭೋಮಂಡಲವನ್ನು ನಡುಗಿಸಿದ
ಗುಡಾಣದ ಹೊಟ್ಟೆಯನ್ನು ಗುಡುಗಿಸಿದ
ಒಂದೂರಿನಲ್ಲಿ...
(ಮತ್ತೆ ಜೋಗುಳದ ಹಾಡು)
ಆತ್ಮ (1-2) ಕೊನೆಗವನು ಕರಕರ ಜಗಿದು ಉಗಿದದ್ದರಲ್ಲಿ
ಕಂಡದ್ದು ಎಳೆ ಕಂದಮ್ಮನ ಕಿವಿಯ ತುಂಡು
ಇನ್ನೂ ಆಕಾರ ಪಡೆಯದ ಭ್ರೂಣಗಳ
ಗೋಜಲು ಗೋಜಲು ಮುದ್ದೆ ಮುದ್ದೆ ಮಾಂಸ
(ಮತ್ತೆ ಜೋಗುಳದ ಹಾಡು. ಆತ್ಮಗಳು ಹೊರಟು ಹೋಗುವರು.)

ಹೊಸ ದೃಶ್ಯ
(ಹೆಂಗಸೊಬ್ಬಳು ಕಸವನ್ನು ತಂದು ಎಸೆಯುವಳು)
ಗಂಡಸು: ಅಮ್ಮೋ ಯಾಕಮ್ಮ ತಿಪ್ಗ ಸುರಿಯೋದ್ಬುಟ್ಟು ನನ್ನ ಹಟ್ಟಿ
ಮುಂದ ಕಸ ಹಾಕ್ತೀಯಾ? ನಿಂಗ ಬುದ್ಧಿ ಗಿದ್ದಿ ಇದ್ಯೋ ಇಲ್ಲೋ...
ಹೆಂಗಸು: ಯಾವನಪ್ಪ ಗಂಡ್ಸು ಅದು? ನಿನ್ನ ಹಟ್ಟಿ ಮುಂದ್ಕೆಲ್ಲಿ
ಹಾಕಿದೀನಿ. ನಾನು ರೋಡ್ಗ ಸುರ್ದೀರಾದು.
ಗಂಡಸು: ರೋಡ್ಗ ಸುರ್ದಿದ್ರೂವಿ ಗಾಳಿಗ ತೂರ್ಕಂಡು ಬರಾಕಿಲ್ವ?
ಹೆಂಗಸು: ಬಂದ್ರ ಬರ್ಲಿಬುಡು. ಗಾಳಿ ಎನ್ ನಾ ಬಿಟ್ಟಿದಾನಾ?
ತೂರ್ಕಬಂದ್ರ ಎತ್ತಿ ಆ ಕಡಗ ಎಸ್ದುಬುಡು.
ಗಂಡಸು: ಮಾದಪ್ಪನ ಹಟ್ಟಿಗ ನಾ ಎಸಿಯೋದೆ?
ಹೆಂಗಸು: ಎಸ್ದುಬುಡು. ನಿಮ್ಮಪ್ಪನ ಮನಿಂದಾ ಇಲ್ಲ ನಮ್ಮಪ್ಪನ ಮನಿಂದಾ?
(ಬಿದ್ದಿರುವ ಕಸವನ್ನು ಆಯುತ್ತಾ ವಿಜ್ಞಾನಿ (2) ಬರುವನು. ಹೆಂಗಸು ಕಸವನ್ನು ಕಸಿದು)
ಹೆಂಗಸು: ಯಾವೂರ ದಾಸಯ್ಯ ನೀನು? ಈ ಕಸಕ್ಕ ಇಷ್ಟೋತ್ಗಂಟ ಈವಯ್ಯನ ಜೊತ್ಗ ಜಗಳಾಡಿದ್ದು ಸಾಕು. ಬಿಡಯ್ಯ ಬಿಡು ಬಿಂಕಿ ಕೊಡ್ತೀನಿ ಅದಕ್ಕ.
ಗಂಡಸು: ನಾನೇ ಬಿಂಕಿ ಕೊಡ್ತೀನಿ ತಕ್ಕ, ನಿನ್ನೂವಿ ಸೇರ್ಸಿ.
ವಿಜ್ಞಾನಿ (2): (ವಿಜ್ಞಾನಿ ತಡೆದು)ಅಯ್ಯೋ ನಿಲ್ಲಿಸ್ರಪ್ಪ
ನೋಡಯ್ಯ ಇದು ಪ್ಲಾಸ್ಟಿಕ್ ಕಸ. ಇದನ್ನ ಸುಡಬಾರದು.
(ಹಿನ್ನೆಲೆಯಲ್ಲಿ ರಾಕ್ಷಸ “ಸುಟ್ಟರೂ ನಾ ಸಾಯುವುದಿಲ್ಲ” ಎಂದು ಕೂಗುವನು.)
ಹೆಂಗಸು: ಅಯ್ಯ ಯಾನ ಮಾತೂ ಅಂತ ಆಡ್ತೀಯಪ್ಪ. ನಮ್ಮೂರಲ್ಲಿ
ಎಲ್ರೂವಿ ಸುಟ್ಟೇ ಹಾಕದು.
ಗಂಡಸು: ಸುಡ್ದಿದ್ರ ಗಾಳಿಗ ತೂರ್ಕಂಡೋಯ್ತದಲ್ಲ?
ವಿಜ್ಞಾನಿ (2): ನೋಡಿ ಪ್ಲಾಸ್ಟಿಕನ್ನ ಸುಡಲೂಬಾರದು. ಹಾಗೆಲ್ಲ ಗಾಳಿಗೆ
ಎಸೆಯಲೂಬಾರದು. ಒಮ್ಮೆ ತಂದ ಕವರನ್ನು ಮತ್ತೆ ಮತ್ತೆ ಬಳಸಿ.
ಹೆಂಗಸು: ಅಲ್ಲ ಸ್ವಾಮಿ, ಊಟ ತಿಂಡಿ ಕಟ್ಟಸ್ಕೊಂಡು ಬಂದ ಕವರನ್ನ
ಮತ್ತೆ ಬಳಸಕ್ಕಾದ್ದಾ?
ವಿಜ್ಞಾನಿ (2): ಆಗುತ್ತೆ. ಆದ್ರೆ ನೀವೇನ್ಮಾಡ್ತೀರಿ? ಊಟ ತಿಂಡಿ ಉಳ್ಸಿದ ಕವರನ್ನೇ ಎಸೆದುಬಿಡ್ತೀರಿ. ಪಾಪದ ಮೂಕ ಪ್ರಾಣಿಗಳು ಆಸೆಯಿಂದ ಪ್ಲಾಸ್ಟಿಕ್ ಸಮೇತ ತಿಂದುಬಿಡ್ತವೆ. ಆಮೇಲೆ ಹೊಟ್ಟೆ ನೋವಿಂದ ನರಳಿ ನರಳಿ ಸಾಯ್ತವೆ.
ಗಂಡಸು: ಹಂಗಾರೆ ಈ ಕವರನ್ನ ಏನ್ಮಾಡ್ಬೇಕು?
ವಿಜ್ಞಾನಿ (2): ನೀವು ಪೇಟೆಗೆ ಹೋಗುವಾಗ ಮನೆಯಿಂದಲೇ ಚೀಲ ತೆಗೆದುಕೊಂಡು ಹೋಗಿ. ನಿಮ್ಮ ಮನೆಗೆ ಬರುವ ಪ್ಲಾಸ್ಟಿಕ್ ಕಡಿಮೆ ಆಗುವಂತೆ ನೋಡಿಕೊಳ್ಳಿ.
ಹೆಂಗಸು: ಆದ್ರೂವಿ ಪ್ಲಾಸ್ಟಿಕ್ ಬತ್ತದಲ್ಲ?
ವಿಜ್ಞಾನಿ (2): ಬಂದದ್ದನ್ನ ಎಸೆಯಬೇಡಿ. ಸುಡಬೇಡಿ. ಒಂದು
ಮೂಲೆಯಲ್ಲಿ ಸಣ್ಣ ಗುಂಡಿ ತೆಗೆದು ಅದರಲ್ಲಿ ಹಾಕಿ.
(ಅಷ್ಟರಲ್ಲಿ ಇನ್ನೊಬ್ಬ ವಿಜ್ಞಾನಿ ಮಕ್ಕಳೊಂದಿಗೆ ಬರುವನು)
ವಿಜ್ಞಾನಿ (1): ಮಕ್ಕಳೆ ತಿಂಡಿ ತಿಂದ ಮೇಲೆ ಕವರನ್ನು ಎಲ್ಲೆಂದರಲ್ಲಿ ಎಸೆಯಬಾರದು.
ಹುಡುಗ: ಎಸಿತೀವಿ.
ವಿಜ್ಞಾನಿ (1): ನೋಡಿ ಇದು ಪ್ಲಾಸ್ಟಿಕ್. ಇದನ್ನು ವಿಷಕಾರಿ
ರಾಸಾಯನಿಕಗಳಿಂದ ಮಾಡಿರುತ್ತಾರೆ. ಇದರಲ್ಲಿ ಸುತ್ತಿಟ್ಟ
ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ರೋಗಗಳು ಬರುತ್ತವೆ.
ಹುಡುಗ: ಹೌದಾ?
ವಿಜ್ಞಾನಿ (2): ಹೌದು. ಬೇಕಿದ್ದರೆ ನಿಮ್ಮ ಮೇಸ್ಟ್ರನ್ನು ಕೇಳಿ.
ಹುಡುಗ: ಹುಂ. ಕೇಳ್ತೀನಿ.
ಹೆಂಗಸು: ಹಂಗಾರೆ ಈ ಪ್ಲಾಸ್ಟಿಕನ್ನು ಏನ್ ಮಾಡೋದು?
ವಿಜ್ಞಾನಿ (3): (ಬಂದು) ಅದನ್ನು ಕರಗಿಸಿ ಡಾಂಬರಿನೊಂದಿಗೆ ಬಳಸಿ ರಸ್ತೆ ಮಾಡಬಹುದು.
ಗಂಡಸು: ಪ್ಲಾಸ್ಟಿಕ್ಕು ಇಲ್ದೆ ಹೋದ್ರ ನಮ್ಗ ಕಷ್ಟ ಆಯ್ತದಲ್ಲ ಸ್ವಾಮಿ?
ವಿಜ್ಞಾನಿ (3): ಹೌದು, ಪ್ಲಾಸ್ಟಿಕ್ ನಮಗೆ ಬೇಕೇ ಬೇಕು.
ವಿಜ್ಞಾನಿ (2): ನಿಮಗೆ ಗೊತ್ತಾ, ಮರಗಿಡಗಳಿಂದಲೂ ಪ್ಲಾಸ್ಟಿಕ್ ತಯಾರಿಸಬಹುದು. ಅದನ್ನು ಜೈವಿಕ ಪ್ಲಾಸ್ಟಿಕ್ ಎನ್ನುತ್ತಾರೆ. ಜೈವಿಕ ಪ್ಲಾಸ್ಟಿಕ್ ಕೊಳೆತು ಗೊಬ್ಬರವಾಗುತ್ತದೆ.
(ಪ್ಲಾಸ್ಟಿಕ್ ರಾಕ್ಷಸ ಅಬ್ಬರಿಸುತ್ತಾ ಪ್ರವೇಶಿಸುವನು. ಹೆಂಗಸು ಗಂಡಸು ಹುಡುಗ ಹೆದರಿ ಓಡಿ ಹೋಗುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ವಿಜ್ಞಾನಿಗಳೇ ನೀವು ಏನೇ ಮಾಡಿದರೂ ನಾನು ಮತ್ತೆ ಬದುಕುತ್ತೇನೆ. ನಾನು ಬಡವರ ಮಿತ್ರ; ಅವರು ನನ್ನನ್ನು ಸಾಕಿ ಸಲಹುತ್ತಾರೆ. ನಾನು ಸಾಯಲಾರೆ.
ವಿಜ್ಞಾನಿ (1): ಲೋ ಪ್ಲಾಸ್ಟಿಕ್ ಭೂತವೇ ನೀನು ನಮ್ಮ ಮಗ್ಗುಲ ಮುಳ್ಳೆಂಬುದು ನೀನು ಹುಟ್ಟಿದಾಗಲೇ ತಿಳಿದಿತ್ತು.
ಪ್ಲಾಸ್ಟಿಕ್ ರಾಕ್ಷಸ: (ನಕ್ಕು) ನನ್ನ ಬಗ್ಗೆ ಭಯ ಇರಲಿ.
ವಿಜ್ಞಾನಿ (1): ಭಯವಿಲ್ಲ ನಮಗೆ. ನಮ್ಮ ಜನರು ತಿಳಿದುಕೊಂಡರೆ ನಿನ್ನ ಅವಸಾನ ಖಂಡಿತ.
ಪ್ಲಾಸ್ಟಿಕ್ ರಾಕ್ಷಸ: ವಿಜ್ಞಾನಿಗಳೇ ನಿಮ್ಮ ಜನರು ಅಜ್ಞಾನಿಗಳು. ಕೆಟ್ಟದ್ದನ್ನು ಉಳಿಸಿಕೊಂಡು ಬರುವುದೇ ಅವರ ಒಳ್ಳೆಯ ಗುಣ.
ವಿಜ್ಞಾನಿ (2): ನಿನ್ನ ಅವಸಾನಕ್ಕೆ ಒಂದೇ ದಾರಿ. ಜನರಿಗೆ ಅರಿವು ಮೂಡಿಸುವುದು.
ವಿಜ್ಞಾನಿ (3): ಪ್ಲಾಸ್ಟಿಕ್ ರಾಕ್ಷಸ
ಪಳಗಿಸಿದರೆ ಸ್ನೇಹಿತ
ಬಳಕೆ ಕಡಿಮೆ ಮಾಡಿದರೆ
ನಮ್ಮ ಪರಿಸರ ಸುರಕ್ಷಿತ.
(ಈ ಮಾತುಗಳನ್ನು ಉಳಿದ ವಿಜ್ಞಾನಿಗಳು ಪುನರುಚ್ಚರಿಸುತ್ತಾರೆ. ರಾಕ್ಷಸ ಕಿರುಚಿ ಅವರ ಮೇಲೆರುಗುತ್ತಾನೆ. ವಿಜ್ಞಾನಿಗಳು ಸುತ್ತುವರಿದು ಹಿಡಿಯುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ಇಲ್ಲ ನಾನು ಸಾಯುವುದಿಲ್ಲ
ಸುಟ್ಟರೂ ನಾ ಸಾಯುವುದಿಲ್ಲ
ಬಚ್ಚಿಟ್ಟರೂ ನಾ ಸಾಯುವುದಿಲ್ಲ
ವಿಜ್ಞಾನಿಗಳು: ಸಾಯಿಸಲಾರೆವು ನಿನ್ನ
ಆದರೆ, ಓ ಪ್ಲಾಸ್ಟಿಕ್ ರಾಕ್ಷಸನೇ
ನೀನು ಮಣ್ಣಲ್ಲಿ ಮಣ್ಣಾಗು
(ನಾಲ್ಕು ಜನ ಕಸವ ಹೊತ್ತುಕೊಂಡು ಬರುತ್ತಾರೆ.)
ಪ್ಲಾಸ್ಟಿಕ್ ರಾಕ್ಷಸ: ಆಗುತ್ತೇನೆ ಆಗುತ್ತೇನೆ ಆಗುತ್ತೇನೆ (ಕುಸಿಯುತ್ತಾನೆ.)
ವಿಜ್ಞಾನಿ (3): ಸ್ನೇಹಿತರೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.
ಎಲ್ಲರೂ: ಕಡಿಮೆ ಮಾಡಿ
ವಿಜ್ಞಾನಿ (2): ಒಂದೇ ಕವರನ್ನು ಮತ್ತೆ ಮತ್ತೆ ಬಳಸಿ
ಎಲ್ಲರೂ: ಮತ್ತೆ ಮತ್ತೆ ಬಳಸಿ.
ವಿಜ್ಞಾನಿ (1): ದಯವಿಟ್ಟು ಪ್ಲಾಸ್ಟಿಕ ಸುಡಬೇಡಿ.
ಎಲ್ಲರೂ: ಪ್ಲಾಸ್ಟಿಕ್ ಸುಡಬೇಡಿ.
ಗಂಡಸು: ಹೊಲ ಗದ್ದೆಗಳಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ
ಎಲ್ಲರೂ: ಎಸೆಯಬೇಡಿ.
ಹೆಂಗಸು: ನಾವು ಪ್ಲಾಸ್ಟಿಕ್ ಬಗ್ಗೆ ತಿಳಿಯುತ್ತಿದ್ದೇವೆ.
ಎಲ್ಲರೂ: ನಾವು ಪ್ಲಾಸ್ಟಿಕ್ ಬಗ್ಗೆ ತಿಳಿಯುತ್ತಿದ್ದೇವೆ, ನೀವು?
ಪ್ಲಾಸ್ಟಿಕ್ ರಾಕ್ಷಸ: (ಎದ್ದು) ನಿಮ್ಮನ್ನೇ ಒಂದು ಸಲ ನೋಡಿಕೊಳ್ಳಿ ಎಷ್ಟೊಂದು ಪ್ಲಾಸ್ಟಿಕ್?
ಎಲ್ಲರೂ: ಎಷ್ಟೊಂದು ಪ್ಲಾಸ್ಟಿಕ್? ಅಲ್ಲಿ ನೋಡಿ, ಇಲ್ಲಿ ನೋಡಿ
ಹಾಡು. ಅಲ್ಲಿ ನೋಡಿ ಇಲ್ಲಿ ನೋಡಿ | ಎಲ್ಲೆಲ್ಲೂ ನೋಡಿರಣ್ಣ
ಅಲ್ಲಿ ನೋಡಿ ಇಲ್ಲಿ ನೋಡಿ | ಎಲ್ಲೆಲ್ಲೂ ನೋಡಿರಕ್ಕ
ಪ್ಲಾ..... ಸ್ಟಿಕ್  ಪ್ಲಾ..... ಸ್ಟಿಕ್||

ಸುಟ್ಟರದು ಸಾಯಂಗಿಲ್ಲ | ಬಿಟ್ಟರದು ಬಿಡಂಗಿಲ್ಲ
ಬೆಟ್ಟ ಗುಡ್ಡ ನದಿ ತೊರೆ | ಎಲ್ಲ ಕಡೆ ಪ್ಲಾಸ್ಟಿಕ್
ತಿಂಡಿ ತೀರ್ಥ ಮನೆ ಮಠ | ಎಲ್ಲ ಕಡೆ ಪ್ಲಾಸ್ಟಿಕ್
ಪ್ಲಾ..... ಸ್ಟಿಕ್ ಪ್ಲಾ..... ಸ್ಟಿಕ್||

ಹೇಳಿದ್ರದು ಮುಗಿಯೋದಿಲ್ಲ | ನಾವು ಸತ್ಯ ತಿಳಿಬೇಕಲ್ಲ |
ಭೂಮಿ ಗಾಳಿ ಉಳಿಬೇಕಲ್ಲ | ನಾವು ನೀವು ಬದುಕ್ಬೇಕಲ್ಲ
ಒiಟಿಜ iಣ ಒiಟಿಜ  iಣ ||

(ಮುಗಿಯಿತು)

ವಿಷಯ: ಚುನಾವಣೆಯಲ್ಲಿ ಹಣದ ಪ್ರಭಾವ.
ನಾಟಕ 

ಝಣ ಝಣ ಚುನಾವಣೆ

ರಚನೆ: ಸಂತೋಷ ಗುಡ್ಡಿಯಂಗಡಿ

ದೃಶ್ಯ-1.
(ಆರು ಜನ ಪತ್ರಿಕೆ ಓದುತ್ತಿರುವಾಗ ಹಿನ್ನೆಲೆಯಲ್ಲಿ ಕುರ್ಚಿ ಮಾರುವ ಹೆಂಗಸಿನ ಸದ್ದು ಕೇಳಿಸುವುದು.)
ಧ್ವನಿ: ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಕುರ್ಚಿ ಮಾರಾಟಕ್ಕಿದೆ ಕುರ್ಚಿ
ಎಲ್ಲರು: ಹಾಂ ಕುರ್ಚಿ?
ನಿರೂಪಕಿ: ಮಂತ್ರಿ ಆಗೋಕೆ ಬೇಕು ಕುರ್ಚಿ, ಎಮ್ಮೆಲ್ಲೆ ಆಗೋಕೆ ಬೇಕು ಕುರ್ಚಿ, ಅಧ್ಯಕ್ಷ
ಆಗೋಕೆ ಬೇಕು ಕುರ್ಚಿ, ಪಂಚಾಯ್ತಿ ಮೆಂಬರಾಗೋಕೆ ಬೇಕು ಕುರ್ಚಿ,ಲಂಚ
ತಗೊಳ್ಳೋಕೆ ಬೇಕು ಕುರ್ಚಿ, ಅಷ್ಟೇ ಅಲ್ಲ ಕಣ್ರೀ ಮೊಳೆ ಹೊಡಿಯೋಕೆಬೇಕೂ
ಕುರ್ಚಿ. ಇದು ಅಂತಿಂಥ ಕುರ್ಚಿ ಅಲ್ಲ ಕೂತ್ರೆ ಸಿಗುತ್ತೆ ತಿಜೋರಿ, ಬಿಟ್ರೆ ಬೀದಿ
ಭಿಕಾರಿ.
(ಎಲ್ಲರು “ಕುರ್ಚಿ ನನಗೆ ಬೇಕು ನನಗೆ ಬೇಕು” ಎನ್ನುವರು)
ನಿರೂಪಕಿ: ನೋಡುದ್ರಾ ಕುರ್ಚಿ ಇಲ್ದೆ ನಮ್ಮ ಜನ ಬದುಕಲ್ಲ. ಅದ್ರಲ್ಲೂ ರಾಜಕಾರಣಿಗಳನ್ನು ಕೇಳ್ಬೇಕೇ? ಎಷ್ಟ್ ಕೋಡ್ತೀರಿ ಕುರ್ಚಿಗೆ?
(ಗುಂಪಿಂದ 1ಕೋಟಿ 2ಕೋಟಿ 4ಕೋಟಿ 6ಕೋಟಿ 8ಕೋಟಿ 10ಕೋಟಿ ಎಂದು ಕೇಳಿ ಬರುವುದು.)
ನಿರೂಪಕಿ:   ನೋಡುದ್ರಾ ಕುರ್ಚಿಗೆ ಡಿಮ್ಯಾಂಡು? ಕುರ್ಚಿ ಮಾರಾಟಕ್ಕಿದೆ ಕುರ್ಚಿ
(ಎಲ್ಲರು ಬಂದು ನನಗೆ ನನಗೆ ಎಂದು ಕುರ್ಚಿಯನ್ನು ಎಳೆದಾಡುವರು. ಮುದುಕಿ ಒಬ್ಬಳು ಭಿಕ್ಷೆ ಬೇಡುತ್ತಾ ಬರುವಳು.)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ...... ಏನಾದ್ರೂ ತಿನ್ನಾಕ ಕೊಡ್ರವ್ವಾ......ಅಣ್ಣಾ ಏನಾದ್ರೂ ತಿನ್ನಾಕ ಕೊಡ್ರವ್ವಾ......
ಎಲ್ಲರು: ನಮಗೆ ಕುರ್ಚಿ ಬೇಕು ಕುರ್ಚಿ
(ಮುದುಕಿ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುವಳು.)
ನಿರೂಪಕಿ: ನೋಡಿದ್ರ ನಮ್ಮ ದೇಶ
ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡೋರು ಒಂದ್ಕಡೆ. ಕುರ್ಚಿಗಾಗಿ ಕಿತ್ತಾಡೋರು ಇನ್ನೊಂದ್ಕಡೆ. ಯಾರಿಗ್ ಬಂತ್ರೀ ಎಲ್ಲಿಗ್ ಬಂತ್ರೀ?
ಎಲ್ಲರು: ಏನು?
ನಿರೂಪಕಿ: ನಲವತ್ತೇಳರ ಸ್ವಾತಂತ್ರ್ಯ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ನಮ್ಮದು ಚಿಲ್ರೆ ಪಕ್ಷ. ಝಣ ಝಣ ಕಾಂಚಾಣದ ಪಕ್ಷ. ನಮಗೂ ಬಂದಿದೆ ಸ್ವಾತಂತ್ರ್ಯ
ನೋಟಿನ ಪಕ್ಷ: ನಾವು ನೋಟಿನ ಪಕ್ಷದವರು. ನಮಗೂ ಬಂದಿದೆ ನೋಡಿ ಸ್ವಾತಂತ್ರ್ಯ
ನಮ್ಮ  ಹತ್ರ ಚಿಲ್ರೆ ಮಾತೇ ಇಲ್ಲ. ನೋಟು ಗರಿ ಗರಿ ನೋಟು. ನೋಟಿನ ಪಕ್ಷ ಕಣ್ರೀ ನಮ್ದು ನೋಟಿನ ಪಕ್ಷ ಕಣ್ರೀ
ಚಿಲ್ರೆ ಪಕ್ಷ: ನಾವು ಚಿಲ್ರೆ ಪಕ್ಷದವರಾದ್ರೂ, ಚಿಲ್ರೆ ವ್ಯವಹಾರನೇ ಇಲ್ಲರೀ. ದೊಡ್ಡ ದೊಡ್ಡದ್ದನ್ನೆಲ್ಲ ಚಕಾಚಕ್ ಮಾಡಿ ಮುಗಿಸ್ತೀವಿ. ಈಗ ನೋಡಿ ದೇಶದ ತುಂಬಾ ಚಿಲ್ರೇದೇ ಮಾತು. ಚಿಲ್ರೆಚಿಲ್ರೆ ಸೇರಿನೇ ನೋಟಾಗೋದು ನೆನಪಿರಲಿ.
ನೋಟಿನ ಪಕ್ಷ: ಚಿಲ್ರೇನ ಇಟ್ಕೋಳ್ಳೋದು ಕಷ್ಟ ಕಣ್ರೀ. ಭಿಕ್ಷೆ ಹಾಕೋಕಷ್ಟೇ ಚಿಲ್ರೆ. ಈಗ
ನೋಟಿದ್ರೇನೆ ಕೆಲಸ ನಡೆಯೋದು.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಿರೂಪಕಿ: ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚಿಲ್ರೆ ಪಕ್ಷ: ಅಜ್ಜೀ ನೆನಪಿಟ್ಕೋ ನಿಂಗೆ ಮನೆ ಕಟ್ಟಿಸಿಕೊಡ್ತೀವಿ. ನಮಗೆ ಓಟಾಕ್ಬೇಕು. ನಮ್ದು ಚಿಲ್ರೆ ಪಕ್ಷ. ಒಂದ್ರೂಪಾಯಿ ಕಾಯಿನ್ ನಮ್ಮ ಚಿಹ್ನೆ ನೆನಪಿಟ್ಕೋ. (ಹೋಗುವರು)
ನೋಟಿನಪಕ್ಷ: ಅಜ್ಜೀ ನಿಂಗೆ ವೃದ್ಧಾಪ್ಯವೇತನ ವಿಧವಾವೇತನ ಬರೋ ಹಂಗೆ ಮಾಡ್ತೀವಿ ನಮಗೆ ಓಟಾಕು. ನಮ್ದು ನೋಟಿನ ಪಕ್ಷ. ಒಂದರ ಮುಂದೆ ಮೂರು ಸೊನ್ನೆ.
ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ನೆನಪಿರ್ಲಿ. (ಹೋಗುವರು)
ಮುದುಕಿ: ಅಯ್ಯೋ ಮುಂಡೆಮಕ್ಳ. ತಿನ್ನೋಕೆ ಅನ್ನ ಕೊಡ್ರೋ ಅಂತ ಬೇಡಿದ್ರೆ ಆ ವೇತನ ಈವೇತನ ಅಂತೀರಲ್ಲಾ! ಥೂ ನಿಮ್ಮ ಭಂಡಬಾಳಿಗ್ ಬೆಂಕಿ ಹಾಕ.
ಹಾಡು: ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ದೃಶ್ಯ-2.
(ಚುನಾವಣಾ ಪ್ರಚಾರ)
ಚಿಲ್ರೆ ಪಕ್ಷ: ಮಾನ್ಯ ಮತದಾರ ಬಂಧುಗಳೇ ಇದು ಚಿಲ್ರೆ ಪಕ್ಷದ ಚುನಾವಣಾ ಪ್ರಚಾರ.  ಬಂಧುಗಳೇ ನೀವಿವತ್ತು ಮಾಲ್‍ಗಳಿಗೆ ಹೋಗ್ತೀರಿ, ನಿಮಗೆ ಬೇಕ್ಬೇಕಾದ್ದನ್ನ ತಗೋತೀರಿ ಅಂತಾದ್ರೆ ಅದಕ್ಕೆ ನಮ್ಮ ಪಕ್ಷ ಕಾರಣ. ಚಿಲ್ರೆ ಸಾಮಾನಿಗಾಗಿ ಅಲೆದಾಡೋದನ್ನ ತಪ್ಪಿಸಿದ್ದೀವಿ ಎಲ್ಲಾನೂ ಒಂದೇ ಕಡೆ ಸಿಗೋ ಹಾಗೆ ಮಾಡಿದ್ದು ನಮ್ಮ ಪಕ್ಷದ ಸಾಧನೆ. ಈ ಬಾರಿ ನೀವೇನಾದರೂ ನಮ್ಮ ಪಕ್ಷಕ್ಕೆ ಬಹುಮತ ತಂದ್ಕೊಟ್ಟರೆ ನಿಮ್ಮ ಬದುಕು ಬಂಗಾರ ಮಾಡ್ತೀವಿ. ಚಿಲ್ರೆ ಚಿಲ್ರೆಯಾಗಿದ್ದ ನಿಮ್ಮ ಬದುಕು ಝಣ ಝಣ ಕಾಂಚಾಣ ಮಾಡ್ತೀವಿ.
ಬಂಧುಗಳೇ ನೆನಪಿರ್ಲಿ ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ. (ಹೋಗುವರು)
ನೋಟಿನಪಕ್ಷ: ಇದು ನೋಟಿನ ಪಕ್ಷದ ಚುನಾವಣಾ ಪ್ರಚಾರ ಬಂಧುಗಳೇ
ತಾಯಂದಿರೇ ಅಕ್ಕಂದಿರೇ ನಾವು ನಿಮಗೆ ಸೀರೆ ಕೊಡಿಸ್ತೀವಿ. ಮೈತುಂಬಾ ಸೀರೆ ಉಟ್ಕಳ್ಳಿ ಅಕ್ಕಂದಿರೇ. ನಾವು ಅಧಿಕಾರಕ್ಕೆ ಬಂದರೆ ನಿಮಗೆ ಟೀವಿ ಕೊಡಿಸ್ತೀವಿ ಮನೆ ಮನೆಗೂ ಟೀವಿ ಬಂದ್ರೆ ಹೆಂಗಸರೆಲ್ಲ ಮನೇಲೆ ಉಳಿತಾರೆ. ಹೆಂಗಸರು ಒಳಗೇ ಉಳಿದ್ರೆ ಅತ್ಯಾಚಾರಗಳು ನಡಿಯಲ್ಲ ತಾಯಂದಿರೇ. ಅದಕ್ಕೆ ನಾವು ಟೀವಿ ಕೊಡ್ತೀವಿ. ನೀವು ನಮಗೆ ಓಟು ಕೊಡಿ.
ನಿಮ್ಮ ಮಾನ ರಕ್ಷಣೆ ನಮ್ಮ ಪಕ್ಷದ ಹೊಣೆ
ನೆನಪಿರಲಿ ಅಕ್ಕಂದಿರೇ ಒಂದರ ಮುಂದೆ ಮೂರು ಸೊನ್ನೆ
ಸಾವಿರ ರೂಪಾಯಿ ನೋಟು ನಮ್ಮ ಪಕ್ಷದ ಚಿಹ್ನೆ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು(ಹೋಗುವರು)

ದೃಶ್ಯ-3.
(ಮುದುಕಿ ಭಿಕ್ಷೆ ಬೇಡುತ್ತಾ ಮನೆ ಮನೆಗೆ ಬರುವಳು)
ಮುದುಕಿ: ಅವ್ವಾ ಮೂರ್ಜಿನದಿಂದ ಉಂಡಿಲ್ಲ ಕಣ್ರವ್ವಾ... ಏನಾದ್ರೂ ತಿನ್ನಾಕ ಕೊಡ್ರವ್ವಾ......
ಮನೆಯಾಕೆ1.: ಅಯ್ಯ ನಮ್ಮಟ್ಟಿ ಮೂದೇವಿ ಅದ್ಯಾನೋ ಚಿಲ್ರೆ ನೋಟು ಅಂದ್ಕಂಡು ಓಟ್ನವರ ಹಿಂದ್ಕ ಅಲಿತವ್ನ. ಹಟ್ಯಾಗ ಗೆಯ್ಯಾಕ ಹೋಗೋರೆ ಯಾರೂವಿ ಇಲ್ಲಕವ್ವ. ಹೀಂಗ ಆದ್ರ ನಾನೂವಿ ನನ್ನ ಮಕ್ಕಮರಿ ಕಟ್ಕಂಡು ನಿನ್ನಂಗ ಬೇಡಾಕ ಹೋಗ್ಬೇಕು. ಈ ವೋಟು ಯಾವಾಗಾರ ಮುಗಿತೈತೋ ಏನೋ
ಮನೆಯಾಕೆ2: ಯಾಕ ಸಾಕವ್ವಾ, ವೋಟ್ನೋರ ಹಿಂದ್ಕ ವೋದ್ರ ಅದ್ಯಾನೋ ದುಡ್ಡು ಕಾಸು
ಕೊಡೋರಂತಲ್ಲ. ಜೊತ್ಗ ವೋಟ್ಲಾಗ ಉಣ್ಣಾಕೂ ಕೊಡ್ತಾರಂತಲ್ಲವ್ವಾ? ಶಿವಣ್ಣಗ ಬರ್ತ ಕಟ್ಟಸ್ಗಂಡು ಬರಾಕೇಳು.
ಮನೆಯಾಕೆ1.: ಕಟ್ಟಸ್ಗಂಡು ಬರಾದು ಇರ್ಲಿ ಆ ಮೂದೇವಿನೇ ಹಟ್ಟಿಗ ಬರಲ್ಲ ಅಂತೀನಿ. ಚನ್ನಾಗಿ ತಿಂದು ಕುಡ್ದು ಎಲ್ಲೋ ದಾರೀಲಿ ಬೀಳ್ತಾನ. ಅದ್ಕ ಈ ವೋಟು ಯಾವಾಗಾರ ಮುಗಿತೈತೋ ಅಂತ ಕಾಯ್ತವ್ನಿ. ಎಲ್ಲಾರೂ ಕೂಲಿ ಮಾಡಾವ ಅಂದ್ರ ಮಳ ಇಲ್ದ ಯಾರ ಹಟ್ಟೀಲೂ ಗದ್ದಾಲೂ ಕೆಲಸಾನೇ ಇಲ್ಲ ಕನವ್ವ.
ಮುದುಕಿ: ಅವ್ವ ಹೊಟ್ಟಗ ಬೆಂಕಿ ಬಿದ್ದೈತ್ರವ್ವ ಸಟಗಾ ನೀರಾದ್ರೂ ಕೊಡ್ರವ್ವ. ನಡಿಯಾಕ ಸಗ್ತೀನೇ ಇಲ್ಲಕವ್ವ
ಮನೆಯಾಕೆ2: ನಮ್ಮಟ್ಟಿಯಾಗ ಚೂರು ತಂಗ್ಳವ ಕೊಡ್ತಿನಿ ಇರು (ತಂದು ಕೊಡುವಳು)
ಮುದುಕಿ: ನಿಂಗ ದೇವ್ರು ಚನ್ನಾಗಿಟ್ಟಿರ್ಲಿ.
(ಮುದುಕಿ ಮೂಲೆಯಲ್ಲಿ ಕುಳಿತು ತಿನ್ನುತ್ತಿರುವಳು. 1ನೇ ಮನೆಗೆ ಚಿಲ್ರೆ ಪಕ್ಷದವರು ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಯಾರಿದ್ದೀರಮ್ಮ ಮನೆಯಾಗೆ?
ಮನೆಯಾಕೆ1: ಮನೆಯವರು ಇದ್ದೀವಿ ಕಣಮ್ಮ. ಓ ನೀವಾ?
ಕಾರ್ಯಕರ್ತರು: ನಾವೇ ನಾವು ಚಿಲ್ರೆ ಪಕ್ಷದವರು, ಝಣ ಝಣ ಕಾಂಚಾಣದವರು.
ಮನೆಯಾಕೆ1: ಕಾಂಚಾಣದವ್ರೋ ಕಾಡುಮನಸ್ರೋ. ನೀವೇನು ಹೇಳ್ಬೇಕು ಅದ್ನ ಹೇಳ್ಬುಟ್ಟು
ಹೊಂಟೋಗಿ. ನಂಗ ಮಾಡಾಕ ಕೆಲ್ಸ ಅದ.
ಚಿನ್ನಮ್ಮ: ಹಾಗೆಲ್ಲ ಅರ್ಜೆಂಟ್ ಮಾಡಿದರೆ ಹೆಂಗಮ್ಮ? ನೋಡು ಈ ಸಲ ನೀನು ನನಗೇ
ಓಟಾಕು. ನಾನೆಲ್ಲಾದ್ರು ಗೆದ್ದು ಬಂದ್ರೆ ನಿಮಗೆ ಏನೇನು ಬೇಕೋ ಅದನ್ನ ಮಾಡಿ ಕೊಡ್ತೀನಿ.
ಕಾರ್ಯಕರ್ತರು: ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ನೋಡವ್ವ ನಿಮ್ಮ ಮನೇಲಿ ವೋಟಿನ ಲೀಸ್ಟಿಗೆ ಸೇರೋರಿದ್ರೆ ತಿಳಿಸು ನಾವೇ ಸೇರಿಸ್ತೀವಿ.
ಮನೆಯಾಕೆ1: ಮೊನ್ನೆ ಹುಟ್ಟಿದ ಮಗ ಐತೆ ಸೇರಿಸ್ಗತೀಯಾ? ನಿಂ ಕೆಲ್ಸ ಆದ್ರ ಕಡ್ದೋಗಿ.
ಚಿನ್ನಮ್ಮ: ಅಯ್ಯೋ ಹಾಗಲ್ಲ ನೋಡು ಒಂದೋಟಿಗೆ ಐನೂರು ರೂಪಾಯಿ ಕೋಡ್ತೀನಿ ಕಣವ್ವ
ಮನೆಯಾಕೆ1: ಅಯ್ಯೋ ಹೌದಾ?
ಕಾರ್ಯಕರ್ತರು: ಚಿನ್ನಮ್ಮಂಗೆ ಜಯವಾಗಲಿ.
ಚಿನ್ನಮ್ಮ: ಹುಂ. ತಗೋ ನಮಗೇನೇ ವೋಟಾಕ್ಬೇಕು ತಿಳೀತಾ
ಕಾರ್ಯಕರ್ತರು: ನಮ್ಮ ಚಿಹ್ನೆ ಒಂದ್ರೂಪಾಯಿ ಕಾಯಿನ್.
ಮನೆಯಾಕೆ1: ಆಯ್ತು ಕಣಮ್ಮ. ನಂ ಐಕ ಇನ್ನೂವಿ ಚಿಕ್ಕವು ಇಲ್ಲಂದ್ರ ನಾಕ್ಜನ ಆಗ್ತಿದ್ದೋ.
ಚಿನ್ನಮ್ಮ: ನಂ ಜನ ಹ್ಯಾಗೆ ದಾರಿಗ ಬರ್ತಾರೆ ನೋಡಿದ್ರ?
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
(ಕೂಗುತ್ತಾ ಹೋಗುವರು. 2ನೇ ಮನೆಗೆ ನೋಟಿನ ಪಕ್ಷದವರು ಬರುವರು)

ಕಾರ್ಯಕರ್ತರು: ನೋಟಿನ ಪಕ್ಷಕ್ಕೇ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಮನೆಯಾಕೆ2: ಓ ವೋಟ್ನೋರು ಬನ್ನಿ. ಈಗ ನಾವೆಲ್ಲ ಬದ್ಕಿದ್ದೋ ಅಂತ ಗೆಪ್ತಿಗೆ ಬಂತಾ?
ನಂಜುಂಡಪ್ಪ: ನೋಡಮ್ಮ ನಮ್ಮ ನೋಟಿನ ಪಕ್ಷ ಅಧಿಕಾರಕ್ಕೆ ಬಂದ್ರೆ ಕೋಟಿ ಖರ್ಚಾದ್ರೂ ಸರಿ ನಿಮ್ಗೆಲ್ಲ ಟೀವಿ ಕೊಡ್ತೀವಿ
ಮನೆಯಾಕೆ2: ಟಿವಿ ಬ್ಯಾಡಕಯ್ಯ ಉಣ್ಣಾಕ ಹಿಟ್ಟು ಗೆಯ್ಯಾಕ ಕೆಲ್ಸ ಕೊಡು
ನಂಜುಂಡಪ್ಪ: ಕೊಡ್ತೀವಿ ಕೊಡ್ತೀವಿ ನಮ್ದು ನೋಟಿನ ಪಕ್ಷ. ಸಾವಿರ ರೂಪಾಯಿ ನೋಟು ನಮ್ಮ ಚಿಹ್ನೆ. ಮನಿಯಾಗೆ ಯಾರೆಲ್ಲ ಇದ್ದೀರಿ?
ಮನೆಯಾಕೆ2: ಯಾಕಪ್ಪ ಹೀಂಗೆ ಕೇಳ್ತೀರಿ? ನಮ್ಮ ಸಂಸಾರ ಅಷ್ಟೂವಿ ನಮ್ಮನಿಯಾಗೇ  
ಇರೋದು
ನಂಜುಂಡಪ್ಪ: ಹಾಗಲ್ಲ ಕಣವ್ವ ನಮ್ದು ಮರ್ಯಾದಸ್ಥರ ಪಕ್ಷ. ದೊಡ್ಡವರೆಷ್ಟು ಚಿಕ್ಕವರೆಷ್ಟು ಅಂತ?
ಮನೆಯಾಕೆ2: ಹೋ ಹಂಗೆ. ದೊಡ್ಡೋರು ಆರ್ಜನ ಐಕ ಎಂಟವೆ.
ನಂಜುಂಡಪ್ಪ: ಹಂಗಾರೆ ಈ ಆರ್ನೋಟು ಮಡಿಕ ಒಂದೋಟ್ಗ ಒಂದ ಸಾವಿರ. ನಮ್ಗೆ ಓಟಾಕ್ಬೇಕು ತಿಳೀತಾ. ನಮ್ಮ ಚಿಹ್ನೆ ಇದೇ.
ಮನೆಯಾಕೆ2: ಐಕಳಿಗೆ ಐನೂರಾರ ಕೊಡಿ ಬುದ್ಧಿ.
ನಂಜುಂಡಪ್ಪ: ನೋಡಿ ನಂ ಜನ. ಎಷ್ಟು ಕೊಟ್ರು ಸಾಕಾಗಲ್ಲ. ನಾವು ಅವರೇ ತಾನೇ!
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
(ಕೂಗುತ್ತಾ ಮುದುಕಿಯ ಬಳಿ ಬರುವರು.)
ನಂಜುಂಡಪ್ಪ: ಅಜ್ಜೀ ಅಜ್ಜೀ ನೀನು ನಮಗೆ ವೋಟಾಕ್ಬೇಕು. ನೋಡು ಸಾವಿರ ರೂಪಾಯಿ ನೋಟು ನಂ ಚಿಹ್ನೆ. ತಕಾ ಮಡಿಕೋ ಈ ನೋಟು. ಇದ್ಕೆ ಓಟಾಕು.
ಕಾರ್ಯಕರ್ತ: ನೋಟಿನ ಪಕ್ಷಕ್ಕೆ ಜಯವಾಗಲಿ
ನೋಟಿನ ನಂಜುಂಡಪ್ಪಂಗೆ ಜಯವಾಗಲಿ
ಸಾವಿರ ರೂಪಾಯಿಗೊಂದೋಟು
ಕಿಲಕಿಲ ಅನ್ನುತ್ತೆ ನಮ್ಮ ಪಕ್ಷದ ನೋಟು
(ಅವರು ಹೋಗಿದ್ದೇ ಚಿಲ್ರೆ ಪಕ್ಷದವರು ಮುದುಕಿಯ ಹತ್ತಿರ ಬರುವರು.)
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಚಿಲ್ರೆ ಚಿನ್ನಮ್ಮಂಗೆ ಜಯವಾಗಲಿ
ಚಿನ್ನಮ್ಮ: ಅಯ್ಯೋ ಅಯ್ಯೋ ಅಜ್ಜೀ ದಾರಿಯಲ್ಲಿ ಮಲಗೋದೆ. ಛೇ! ಛೇ! ನೀನು ನಮಗೆ ಓಟಾಕು. ನಿಂಗೆ ಮನೆ ಕಟ್ಟಸಿಕೊಡ್ತೀವಿ. ತಕ ಮಡಿಕ ಈ ಐನೂರರ ನೋಟು. ಒಂದ್ರೂಪಾಯಿ ಕಾಯಿನ್ ನಂ ಚಿಹ್ನೆ
ಕಾರ್ಯಕರ್ತರು: ಚಿಲ್ರೆ ಪಕ್ಷಕ್ಕೆ ಜಯವಾಗಲಿ
ಒಂದ್ರೂಪಾಯಿಗೆ ನಿಮ್ಮ ಮತ
ನಮ್ಮ ಬದುಕಿಗೆ ಮಾತ್ರ ಹಿತ.
ಮುದುಕಿ: ಅವ್ವಾ ಇದ್ನ ಮಡಿಕಂಡು ಯಾರಾದ್ರು ತಿನ್ನಾಕ ಕೊಡ್ರವ್ವ.
ನಿರೂಪಕಿ: ನೋಡಿ (ಮುದುಕಿಯನ್ನು ತೋರಿಸಿ) ಈ ಭಾರತದ ಹೊಟ್ಟೆ ಖಾಲಿ ಮಾಡಿನೇ
ನೂರಾರು ಆಸೆಗಳನ್ನು ತೋರಿಸುವ ಚುನಾವಣೆ ಬರೋದು.
ಮುದುಕಿ: ಮಗಾ, ಈ ನೋಟ್ನ ಮಡಿಕಂಡು ಏನಾದ್ರೂ ತಿನ್ನೋದು ಕೊಡು.
ನಿರೂಪಕಿ: ಈ ದುಡ್ಡನ್ನ ನಿನ್ನ ಮಕ್ಕಳಿಗೆ ಕೊಡು.
ಮುದುಕಿ: ಅಯ್ಯೋ ನಂಗೆ ಯಾರೂ ಇಲ್ಲಕವ್ವ. ಓಟಿಲ್ದ ನಂಗ ಓಟಾಕು ಅಂತಾರ ಈ
ಮುಂಡೆಮಕ್ಳು.
ನಿರೂಪಕಿ: ಅಯ್ಯೋ ನಮ್ಮ ಭಾರತವೇ, ಈ ಬಡವರ ಭಾರವ ಹೇಗೆ ಹೊರುವೆ?
(ಹಿನ್ನೆಲೆಯಲ್ಲಿ “ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಭಾರತದಲ್ಲಿ ಬಡವರ ನಿರ್ಮೂಲನೆ ಮಾಡ್ತೀವಿ”
“ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಬಡವರಿಗೆ ವಿಶೇಷ ಪ್ಯಾಕೇಜ್ ತರ್ತೀವಿ”
ನಿರೂಪಕಿ: ಇವರು ಬಡತನ ನಿರ್ಮೂಲನೆ ಮಾಡುವುದಿಲ್ಲ, ಬಡವರನ್ನೇ ನಿರ್ಮೂಲನೆ ಮಾಡುತ್ತಾರೆ. ಬಾ ಅಜ್ಜೀ ನಿಂಗೆ ತಿನ್ನೋಕೆ ಕೊಡ್ತೀನಿ.

ದೃಶ್ಯ-4
ಶಿಷ್ಯ: (ಓಡಿಬಂದು) ಸ್ವಾಮಿಗಳು ಬರುತ್ತಿದ್ದಾರೆ
ಗಬ್ಬೂರು ಗದ್ದಿಗೆ ಮಠದ
ಶ್ರೀ ಶ್ರೀ ಶ್ರೀ ಮಿಷ್ಟಿಕಾನಂದ ಮಹಾಸ್ವಾಮಿಗಳು ಬರುತ್ತಿದ್ದಾರೆ.
ಸ್ವಾಮಿ: (ಸ್ವಾಮಿಗಳು ಬಂದು) ಶಿಷ್ಯ ನಮ್ಮ ಇಂದಿನ ಕಾರ್ಯ ಕ್ರಮವೇನು?
ಶಿಷ್ಯ: ಚಿಲ್ರೆ ಪಕ್ಷ ಮತ್ತು ನೋಟಿನ ಪಕ್ಷದವರು ತಮ್ಮ ಭೇಟಿಗಾಗಿ ಕಾಯುತ್ತಿದ್ದಾರೆ.
ಸ್ವಾಮಿ: ಒಬ್ಬೊಬ್ಬರನ್ನೇ ಕರೆಯಿಸು
ಶಿಷ್ಯ: ಆಗಲಿ ಮಹಾಸ್ವಾಮಿ. ಚಿನ್ನಮ್ಮ (ಚಿನ್ನಮ್ಮ ಓಡಿ ಬಂದು ಅಡ್ಡಬಿದ್ದು)
ಚಿನ್ನಮ್ಮ: ಅಡ್ಡಬಿದ್ದೆ ಬುದ್ಧಿ. ನಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ಮಠಕ್ಕೆ ಒಂದು ಮೆಡಿಕಲ್ ಕಾಲೇಜು, ಬೆಂಗ್ಳೂರಲ್ಲಿ ಒಂದು ಮಾಲ್ ಮಾಡಿಸಿಕೊಡ್ತೀವಿ. ನಿಮ್ಮ ಸಮಾಜದವರಿಗೆ ನೀವು ತಿಳಿಸಿ ಹೇಳ್ಬೇಕು ಬುದ್ಧಿ.
ಸ್ವಾಮಿ: ನೋಡಿ ನಾವು ಮಠಕ್ಕೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ ಕಡಿಮೆ ಬೀಳುತ್ತೆ
ಚಿನ್ನಮ್ಮ: ಈಗ ತುರ್ತಿಗೆ ಅಂತ 5ಕೋಟಿ ಕೊಡ್ತೀವಿ. ಮುಂದೆ ಅಧಿಕಾರಕ್ಕೆ ಬಂದ್ಮೇಲೆ
ಎಲ್ಲಾ ನಾವೇ ಕೊಡ್ತೀವಿ ಬುದ್ಧಿ.
ಸ್ವಾಮಿ: ಆಯ್ತು ನಮ್ಮ ಕೃಪೆ ನಿಮ್ಮ ಮೇಲಿದೆ. ಹೋಗಿ ಬನ್ನಿ. (ಚಿನ್ನಮ್ಮ ಹೋಗುವಳು)
ಶಿಷ್ಯ, 25ಕೋಟಿ ಆಟ ನಡೆಯಲ್ಲ ಅನ್ಸುತ್ತೆ.
ಶಿಷ್ಯ: ಹೌದು ಬುದ್ಧಿ ಸ್ವಲ್ಪ ಕಡಿಮೆ ಮಾಡಿ.
ಸ್ವಾಮಿ: ಆಯ್ತು. 20ಕೋಟಿ?
ಶಿಷ್ಯ: ಇದೂ ಜಾಸ್ತಿನೇ ಬುದ್ಧಿ.
ಸ್ವಾಮಿ: ಹೌದಾ? ನನ್ನ ವ್ಯವಹಾರ ಜ್ಞಾನ ಇಷ್ಟು ಇಳಿದು ಹೋಗಿದೆಯೇ! 15ಕೋಟಿ?
ಶಿಷ್ಯ: ಆಗಬಹುದು ಆಡಿ ನೋಡುವಾ. ಕರೀತೇನೆ. ನಂಜುಂಡಪ್ಪಾ...        
ನಂಜುಂಡಪ್ಪ: (ಬಂದು) ಅಡ್ಡಬಿದ್ದೆ ಬುದ್ಧಿ. ನಾನು ನಿಮ್ಮ ಸಮಾಜದವನೇ
ಸ್ವಾಮಿ: ಅದು ನಮ್ಮ ಗಮನಕ್ಕೆ ಬಂದಿದೆ.
ನಂಜುಂಡಪ್ಪ: ಬುದ್ಧಿ ನಾವು ಅಧಿಕಾರಕ್ಕೆ ಬಂದ್ರೆ ನಿಮ್ಮ ಕಣ್ಣು ಬಿದ್ದಿರುವ ಜಾಗನೆಲ್ಲಾ
ಡಿನೋಟಿಫಿಕೇಷನ್ ಮಾಡಿಕೊಡ್ತೀವಿ. ಆಮೇಲೆ.....
ಸ್ವಾಮಿ: ನಾವೊಂದು ಗೋಮಾಳ ಖರೀದಿ ಮಾಡೋರಿದ್ದೀವಿ. ಆದ್ರೆ ಅದಕ್ಕೆ 25ಕೋಟಿ
ಶಿಷ್ಯ: 15ಕೋಟಿ
ಸ್ವಾಮಿ: ಹಾಂ. ಹೌದು 15ಕೋಟಿ ಕಡಿಮೆ ಬೀಳುತ್ತೆ.
ನಂಜುಂಡಪ್ಪ: ಈಗ ತುರ್ತಿಗೆ ಅಂತ ಪಾರ್ಟಿಯಿಂದ 10ಕೋಟಿ ಕೋಡ್ತೀವಿ ಆದರೆ ಓಟೂ...
ಸ್ವಾಮಿ: (ತಟ್ಟನೆ ನಿಂತು) ಆಗಲಿ ನಮ್ಮ ಸಂಪೂರ್ಣ ಕೃಪೆ ನಿಮ್ಮ ಮೇಲಿದೆ ಹೋಗಿ ಬನ್ನಿ.
(ನಂಜುಂಡಪ್ಪ ಹೋಗುವನು.)
ಸ್ವಾಮಿ: ಶಿಷ್ಯ ಇಂದು ನಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಬಪ್ಪರೆ 15ಕೋಟಿ
ಸಂಪಾದನೆ.
ಶಿಷ್ಯ: ಬುದ್ಧೀ ಕೊಳ್ತೂರಲ್ಲಿ 25 ಜೋಡಿ ಸಾಮೂಹಿಕ ವಿವಾಹ ನೀವೇ ಮಾಡ್ತೀನಿ...
ಸ್ವಾಮಿ: ಮದುವೆ ನೀನೇ ಮಾಡಿಸು. ನಮಗೆ ವಿಶ್ರಾಂತಿ ಬೇಕಿದೆ.            
(ಹೋಗುವನು, ಹಿಂದೆಯೇ ಶಿಷ್ಯ ಹೋಗುವನು.)

ದೃಶ್ಯ-5
(ನಿರೂಪಕಿ ಹಾಡುತ್ತಾ ಬರುವಳು)
ಹಾಡು: ಹಣವೂ ಹೆಂಡ ಕಂಡದ ಜೊತೆಯಲಿ
ಬರುವುದು ನಮ್ಮಯ ಚುನಾವಣೆ
ಋಣದಲಿ ಬಿದ್ದು ನಮ್ಮಯ ಜನತೆ
ಮಾರಿಕೊಳ್ಳುವರು ಮತವನ್ನೆ!!

ಕಳ್ಳ ಬಂದರೂ ವೋಟ ಕೊಡುವರು
ಸೀಟು ಇಡುವರು ಸುಳ್ಳರಿಗೂ
ಮಳ್ಳ ಜನಗಳು ಮತವನು ಮಾರಿ
ಐದು ವರ್ಷಗಳು ಮರುಗುವರು.

ನಿರೂಪಕಿ :ನಮ್ಮ ದೇಶದಲ್ಲಿ ಇಂದು ಚುನಾವಣೆ ಒಂದು ಉದ್ಯಮದಂತೆ ಬೆಳೆದಿದೆ.
ಚುನಾವಣಾ ಸಮಯದಲ್ಲಿ ಬಂಡವಾಳ ಹಾಕಿ ಗೆದ್ದು ಬಂದು ಲಾಭ
ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಜೈಲಿನಲ್ಲಿದ್ದೂ ಗೆಲ್ಲುತ್ತಾರೆಂದರೆ, ಅದು
ವ್ಯಕ್ತಿಯ ವರ್ಚಸ್ಸಲ್ಲ ಹಣದ ಪ್ರಭಾವ. ಗೆಲ್ಲುವುದಕ್ಕಾಗಿ ಹಣದ ಹೊಳೆಯನ್ನೇ
ಹರಿಸುತ್ತಾರೆ, ಗೆದ್ದು ಭ್ರಷ್ಟಾಚಾರ ಮಾಡುತ್ತಾರೆ.

(ಬೇರೆ ಬೇರೆ ಪಕ್ಷದವರು ಪ್ರಚಾರ ಮಾಡುತ್ತಾ ಓಡಾಡುತ್ತಾರೆ. ನಾನಾ ತರಹದ ಆಮಿಷಗಳು ಕೇಳಿ ಬರುತ್ತವೆ.)
ಹಾಡು :ಝಣ ಝಣ ಚುನಾವಣೆ
ಹಣ ಹಣ ಚಿತಾವಣೆ
ದುಡ್ಡಿಗುಂಟು ಓಟು
ಮುಗ್ಧ ಜನಗಳಿಗೇಟು


Monday, September 7, 2015

ಪ್ರಜಾವಾಣಿಯ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾದ ಪ್ರಬಂಧ