Friday, March 27, 2015


ಪ್ರತಿಭಾಕಾರಂಜಿ; ಬೇಕಿದೆ ಸಾಂಸ್ಕೃತಿಕ ರೂಪುರೇಷೆ

(ರಾಜ್ಯಮಟ್ಟದ ಪ್ರತಿಭಾಕಾರಂಜಿಯ ನೆಪದಲ್ಲಿ ನಾನು ಬರೆದ ಬರಹ)

ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಕಂಡದ್ದು

ಮತ್ತೊಂದು ರಾಜ್ಯಮಟ್ಟದ ಪ್ರತಿಭಾಕಾರಂಜಿ ಮುಗಿದಿದೆ. ಒಂದಷ್ಟು ಮಕ್ಕಳು ಬಹುಮಾನಿತರಾಗಿ ಕುಷಿಯಿಂದ ತೆರಳಿದರೆ ಒಂದಷ್ಟು ಮಕ್ಕಳು ಬಹುಮಾನವಿಲ್ಲದೆ ಬೇಸರದಿಂದ ಹಿಂತಿರುಗಿದರೆ, ಇನ್ನೊಂದಷ್ಟು ಮಕ್ಕಳು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಳಕಿತರಾದರೆ, ಇನ್ನೂ ಒಂದಷ್ಟು ಮಕ್ಕಳು ಶಿಕ್ಷಕರು ಪೋಷಕರು ನಮಗೆ ಮೋಸ ಮಾಡಿದರು, ಅನ್ಯಾಯ ಮಾಡಿದರು ಎಂದು ಹಲುಬಿಕೊಂಡು ಮರಳಿದರು. ಒಟ್ಟಾರೆ ಪ್ರತಿಭಾಕಾರಂಜಿ ಎಂದಿನ ಕುಷಿ, ಬೇಸರ, ಸಂಕಟ, ಸಿಟ್ಟುಗಳ ನಡುವೆ ಮುಗಿದು ಹೋಗಿದೆ.

ಮಂಡ್ಯ ಜಿಲ್ಲೆಯ ವಿಶ್ವಮಾನವ ವಿದ್ಯಾಸಂಸ್ಥೆಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಬಾರಿಯ ರಾಜ್ಯಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ ಒಂದರ್ಥದಲ್ಲಿ ಯಶಸ್ವಿಯಾಗೆ ಮುಗಿಯಿತು. ಅಲ್ಲಿ ಆಗಮಿಸಿದ ಬೇರೆ ಬೇರೆ ಜಿಲ್ಲೆಗಳ ಶಿಕ್ಷಕರು ಮಕ್ಕಳು ಹಿಂದೆ ಬೇರೆ ಜಿಲ್ಲೆಗಳು ಆಯೋಜಿಸಿದ ಕಾರ್ಯಕ್ರಮಗಳಿಗೆ ಹೋಲಿಕೆ ಮಾಡಿ ಇಲ್ಲಿಯದು ಕಳಪೆ ಎಂಬರ್ಥದಲ್ಲೆ ಮಾತನಾಡುತ್ತಿದ್ದರು. ರಾಮನಗರ ಜಿಲ್ಲೆಯ ಶಿಕ್ಷಕರೊಬ್ಬರು ತೀರ್ಪುಗಾರರನ್ನ ಸರಿಯಾಗಿ ನೇಮಿಸಿಲ್ಲ ಎಂದು ಸಾರಾಸಗಟಾಗಿ ಎಲ್ಲಾ ತೀರ್ಪುಗಾರರನ್ನು ಹೀಗಳೆಯುತ್ತಾ, ವೇದಿಕೆಯಲ್ಲಿ ಮಕ್ಕಳು ಪ್ರದರ್ಶನ ನೀಡುತ್ತಿದ್ದಾಗ ತಾನೊಬ್ಬ ಶಿಕ್ಷಕ ಎನ್ನುವುದನ್ನೂ ಮರೆತು ತನ್ನ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಗಲಾಟೆ ಎಬ್ಬಿಸುತ್ತಿದ್ದರು. ಬೆಂಗಳೂರಿನಿಂದ ಬಂದಂತಹ ಶಿಕ್ಷಕಿಯೊಬ್ಬರು, ಕೋಲಾಟದ ತೀರ್ಪುಗಾರರೊಬ್ಬರು ಚೂಯಿಂಗ್ ಅಗೆಯುತ್ತಿರುವುದನ್ನು ಕಂಡು ವೇದಿಕೆ ಹತ್ತಿ ‘ರಾಜ್ಯಮಟ್ಟದ ಕಾರ್ಯಕ್ರಮದ ತೀರ್ಪುಗಾರರು ನೀವು, ವಿದ್ಯಾರ್ಥಿಗಳ ಮುಂದೆ ಶಿಸ್ತಿನಿಂದ ವರ್ತಿಸಬೇಕು’ ಎಂದು ಆಕ್ಷೇಪಿಸಿದರು. ಜಿಲ್ಲೆ ಮತ್ತು ಹೆಸರು ಹೇಳಿಕೊಳ್ಳಲು ಹಿಂಜರಿದ ಶಿಕ್ಷಕರೊಬ್ಬರು ಇಂತಹ ಕಾರ್ಯಕ್ರಮವನ್ನು ತಾನು ಒಂದೇ ದಿನದಲ್ಲಿ ಆಯೋಜನೆ ಮಾಡಿಕೊಳ್ಳಬಲ್ಲೆ ಎಂಬ ದುಹಂಕಾರದ ಮಾತನ್ನೂ ಆಡಿದರು.

ಇವುಗಳನ್ನೆಲ್ಲ ಮೀರಿ ಮೂರು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳು ವಯಕ್ತಿಕ ಹಾಗು ಗುಂಪು ಸ್ಪರ್ಧೆಗಳಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಮೆರೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಿರಸಿ, ಹಾವೇರಿ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಮಕ್ಕಳಂತೂ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದರು. ಆ ಜಿಲ್ಲೆಗಳ ಮಕ್ಕಳ ತಯಾರಿ, ಹೊಂದಾಣಿಕೆ, ಓದಿನಷ್ಟೆ ಸಾಂಸ್ಕøತಿಕ ಕಾರ್ಯಕ್ರಮಗಳ ಬಗೆಗಿನ ಆಸಕ್ತಿ ಅವರ ಪ್ರದರ್ಶನಗಳಲ್ಲಿ ಎದ್ದು ಕಾಣುತ್ತಿತ್ತು. ಈ ಜಿಲ್ಲೆಗಳ ಅಧಿಕಾರಿಗಳು ಕೂಡ ಮಕ್ಕಳ ಜೊತೆ ಜೊತೆಗೆ ಇದ್ದು ಅವರನ್ನು ಹುರಿದುಂಬಿಸುತ್ತಿರುವುದು ಕಾಣಿಸುತ್ತಿತ್ತು. ಕೆಲವೊಂದು ಜಿಲ್ಲೆಗಳ ಅಧಿಕಾರಿಗಳು, ಶಿಕ್ಷಕರು ತಮ್ಮ ಮಕ್ಕಳ ಜೊತೆ ಇರುವುದು ಹೋಗಲಿ, ತಮ್ಮ ತಂಡ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿ ಎಂದು ಕೋರಿಕೊಂಡರೂ ಅವರ ಪತ್ತೆಯಿರದೆ ಮಕ್ಕಳ ಬಗೆಗಿನ ನಿರ್ಲಕ್ಷ್ಯವೂ ಎದ್ದು ಕಾಣಿಸುತ್ತಿತ್ತು.

ಶಿಕ್ಷಕರು, ಅಧಿಕಾರಿಗಳು ಮಕ್ಕಳ ಬಗ್ಗೆ ಅಸಡ್ಡೆ ತೋರಿದಷ್ಟೂ ಅವರ ಪ್ರದರ್ಶನ ನೀರಸವಾಗುತ್ತದೆ. ತಮಗೆ ಬಹುಮಾನ ಬರದೇ ಇದ್ದಾಗ ತೀರ್ಪುಗಾರರು ಸರಿಯಿಲ್ಲ, ಮೋಸ ಮಾಡಿದರು ಎಂದೆಲ್ಲ ದೂರಿ ತಮ್ಮ ನಿರ್ಲಕ್ಷ್ಯವನ್ನು ಮುಚ್ಚಿಕೊಂಡು ಬಿಡಬಹುದು. ಇಲ್ಲಿ ಒಂದು ಸ್ವಾರಸ್ಯಕರ ಪ್ರಸಂಗವೂ ನಡೆಯಿತು. ತಮ್ಮ ಮಗುವಿಗೆ ಬಹುಮಾನ ಬರಲಿಲ್ಲವೆಂದು ಪೋಷಕರೊಬ್ಬರು ದೊಡ್ಡ ದನಿಯಲ್ಲಿ ಆಕ್ಷೇಪ ತೆಗೆದರು. ತೀರ್ಪುಗಾರರ ತೀರ್ಮಾನವೇ ಅಂತಿಮವೆಂದು ಘೋಷಿಸಿದಾಗ ವರಸೆ ಬದಲಿಸಿದ ಅವರು ನೀವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ದನಿ ಏರಿಸಿದರು. ಪೋಷಕರು ಗಮನಿಸಬೇಕು ಒಂದು ಬೆಟ್ಟಕ್ಕಿಂತ ಇನ್ನೊಂದು ದೊಡ್ಡದಿರುತ್ತದೆ. ತಮ್ಮ ಮಕ್ಕಳಷ್ಟೇ ಪ್ರತಿಭಾವಂತರು ಎಂಬ ಕುರುಡುತನವನ್ನು ಬಿಟ್ಟುಬಿಡಬೇಕು. ತೀರ್ಪು ಸರಿಯಿಲ್ಲವೆಂದರೆ ಇಲಾಖೆಯ ಮುಂದೆ ಬಂದು ಪ್ರತಿಭಟಿಸಬೇಕು. ಪ್ರತಿಭಾಕಾರಂಜಿಗೊಂದು ಸಮಗ್ರ ನೀತಿಯನ್ನು ರೂಪಿಸುವಂತೆ ಒತ್ತಾಯಿಸಬೇಕು. ಅದುಬಿಟ್ಟು ವೇದಿಕೆಯ ಮೇಲೆ ಬಂದು ಬೇರೆ ಮಕ್ಕಳ ಅವಕಾಶವನ್ನು ತಪ್ಪಿಸುವಂತೆ ಪ್ರತಿಭಟಿಸಬಾರದು.

ಜಾನಪದ ಕಲೆಯನ್ನು ಉಳಿಸುವ ಸೋಗು!

ಪ್ರತಿಭಾಕಾರಂಜಿಯಲ್ಲಿ ಅತ್ಯಂತ ಗೊಂದಲವಾಗುವುದು ಗುಂಪು ಸ್ಪರ್ಧೆಗಳಲ್ಲಿ. ವೇದಿಕೆಯಲ್ಲಿ ಪ್ರದರ್ಶನ ನೀಡುವ ಮಕ್ಕಳ ವಿಚಾರದಲ್ಲಿ ಅಲ್ಲ, ಅವರಿಗೆ ಹಿಮ್ಮೇಳದಲ್ಲಿ ಸಾತ್ ನೀಡುವ ಮಕ್ಕಳ ವಿಚಾರದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಗೊಂದಲವಿದೆ. ಕೋಲಾಟಕ್ಕೆ ಆರು ಜನ ಎಂದು ಸುತ್ತೋಲೆಯಲ್ಲಿ ಇರುತ್ತದೆ. ಕೆಲವು ಜಿಲ್ಲೆಗಳಲ್ಲಿ ಹಾಡುಗಾರರನ್ನು ಬಳಸಿಕೊಂಡರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಇವುಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಈ ಬಗ್ಗೆ ಇಲಾಖೆ ಶಿಕ್ಷಕರಿಗೆ ಸ್ಪಷ್ಟಪಡಿಸಬೇಕು. ಬಳಸಿಕೊಳ್ಳವುದಾದರೆ ಎಷ್ಟು ಮಕ್ಕಳನ್ನು ಎಂದು ನಿಗದಿಪಡಿಸಬೇಕು. ಇಲ್ಲವಾದರೆ ಆಡುವವರು ಆರು ಮಂದಿ ಆದರೆ ಹಿಮ್ಮೇಳದಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ ಉದಾಹರಣೆ ಕೋಲಾಟ, ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಕಂಡುಬಂದವು. ಛದ್ಮವೇಷ ಎಂದರೇನು? ಜಾನಪದ ನೃತ್ಯ ಎಂದರೆ ಯಾವುದು? ಕೋಲಾಟ ಎಂದರೆ ಏನು? ಇತ್ಯಾದಿಯಾಗಿ ಇಲಾಖೆ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಜನಪದ ಹಾಡಿಗೆ ಕುಣಿಯುವುದು ಜಾನಪದ ನೃತ್ಯವಾಗುತ್ತದೆ. ಕೋಲು ಹಿಡಿದುಕೊಂಡು ಯಾವುದೋ ಹಾಡನ್ನು ಹಾಡಿಕೊಂಡು ಸರ್ಕಸ್ ಮಾಡುವುದು ಕೋಲಾಟವಾಗುತ್ತದೆ. ಜಾನಪದದ ವೀರಗಾಸೆಯ ವೇಷವು ಛದ್ಮವೇಷವಾಗುತ್ತದೆ.

ಕನ್ನಡನಾಡಿನಲ್ಲಿ ಸಮೃದ್ಧವಾದ ಜಾನಪದ ಸಂಪತ್ತಿದೆ. ಹಲವಾರು ಜಾನಪದ ಪ್ರಕಾರಗಳಿವೆ. ಕೋಲಾಟದ ವಿಶಿಷ್ಟ ಪರಂಪರೆಯಿದೆ. ಹಾವೇರಿ ಜಿಲ್ಲೆಯ ಸ್ಪರ್ಧಿಗಳು ತೀರ್ಪುಗಾರರ ಮೇಲೆ ವಿಚಿತ್ರವಾದ ಹೇರಿಕೆಯೊಂದನ್ನು ಹೇರುವುದು ಕಂಡು ಬಂತು. ಜಾನಪದ ನೃತ್ಯ ಮತ್ತು ಕೋಲಾಟ ಸ್ಪರ್ಧೆಗಳಲ್ಲಿ “ಜಾನಪದ ಕಲೆಯನ್ನು ಉಳಿಸಿ” ಎಂಬ ಬ್ರಹತ್ ಪರದೆಗಳನ್ನು ತಮ್ಮ ಪ್ರದರ್ಶನದ ಕೊನೆಯಲ್ಲಿ ಹಿಡಿದು ಪ್ರೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸುತ್ತಿದ್ದರು. ಆದರೆ ಅವರೇ ಜಾನಪದ ವಾದ್ಯಗಳ ಜಾಗದಲ್ಲಿ ಕಾಂಗೋದಂತಹ ವಾದ್ಯಗಳನ್ನು ನುಡಿಸುತ್ತಿದ್ದರು. ಮಯ್ಸೂರು ಜಿಲ್ಲೆಯ ಮಕ್ಕಳು ಕೋಲಾಟಕ್ಕೆ ಹಾರ್ಮೋನಿಯಂ ತಬಲಾದಂತಹ ಶಾಸ್ತ್ರೀಯ ವಾದ್ಯಗಳನ್ನು ನುಡಿಸುತ್ತಿದ್ದರು.  ಇನ್ನು ಕೋಲಾಟಕ್ಕೆ ಕೋಲಿನಪದಗಳನ್ನು ಬಿಟ್ಟು ಗಿಮಿಕ್ಕಿನ ಹಾಡುಗಳನ್ನು ಹಾಡಿ, ಕೋಲಾಟವನ್ನೂ ಸರ್ಕಸ್ ಎಂಬಂತೆ ಆಡುವುದು ಕೋಲಾಟವಲ್ಲ ಎನ್ನುವುದನ್ನು ಅರಿಯಬೇಕು. ಹೀಗೆಲ್ಲ ಮಾಡಿ ಜಾನಪದ ಕಲೆಗಳನ್ನು ಉಳಿಸಲು ಆಗುವುದಿಲ್ಲ ಎನ್ನುವುದನ್ನು ಮನಗಾಣಬೇಕು. ತಮ್ಮದೆ ಜಿಲ್ಲೆಯ ಜಾನಪದಕಲೆಯನ್ನು ಅಧ್ಯಯನ ಮಾಡಿ ಅದನ್ನು ಪ್ರಸ್ತುತಪಡಿಸಿದರೆ ಅದು ಜಾನಪದದ ಉಳಿವು. ಇದರಿಂದ ಮಕ್ಕಳು ತಮ್ಮ ಜಿಲ್ಲೆಯ ಜಾನಪದ ಕಲೆಯನ್ನು ಪಠ್ಯೇತರವಾಗಿ ಕಲಿಯುತ್ತಾರೆ. ಗಿಮಿಕ್ಕು, ಸರ್ಕಸ್ ಮಾಡಿಕೊಂಡೂ ರಾಜ್ಯಮಟ್ಟವನ್ನು ತಲುಪುತ್ತಾರೆಂದರೆ ಒಂದೋ ಅಲ್ಲಿನ ಸ್ಪರ್ಧೆಗಳು ಇದಕ್ಕೂ ಕಳಪೆಮಟ್ಟದ್ದಾಗಿರಬೇಕು ಅಥವಾ ಕೆಟ್ಟ ತೀರ್ಪುಗಾರಿಕೆಯಿರಬೇಕು. ಇದು ಅಲ್ಲವಾದರೆ ಜಗಳ ತೆಗೆದು ಹೆದರಿಸಿಕೊಂಡು ಬಹುಮಾನ ಗಿಟ್ಟಿಸರಬೇಕು!

ಮಕ್ಕಳ ನಡುವೆ ರಂಗಭೂಮಿ ಬೆಳೆಯಲಿ

ಪ್ರತಿಭಾಕಾರಂಜಿಯಲ್ಲಿ ಬಹುದೊಡ್ಡ ಸ್ಪರ್ಧೆಯಾದ ನಾಟಕ ಸ್ಪರ್ಧೆಯಲ್ಲಿ ಮಕ್ಕಳ ನಾಟಕವೇ ನಾಪತ್ತೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಟಕ ಶಿಕ್ಷಕರೂ ಈ ಬಗ್ಗೆ ಗಮನ ಹರಿಸದಿರುವುದು ಆಶ್ಚರ್ಯ! ಬಹುಮಾನದ ಜಿದ್ದಿಗೆ ಬಿದ್ದಿರುವ ಶಿಕ್ಷಕರು ಒಂದು ಒಳ್ಳೆಯ ನಾಟಕ ಮಾಡಿ ಹೇಗಾದರೂ ರಾಜ್ಯಮಟ್ಟದ ಬಹುಮಾನ ಗಳಿಸಬೇಕು ಎಂಬುದಷ್ಟೇ ಗುರಿಯಾಗಿಟ್ಟುಕೊಂಡಂತೆ ಕಾಣುತ್ತದೆ. ನಾಟಕ ಶಿಕ್ಷಕರಾದರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಕ್ಕಳ ನಾಟಕಗಳನ್ನು ಆಡಿಸಿ ಹೊಸ ಅಭಿರುಚಿಯನ್ನು ಬೆಳೆಸಬಹುದು.

ಸರ್ಕಾರಿ ಪ್ರೌಢ ಶಾಲೆ, ಕ್ಯಾಲಕೊಂಡದ ಮಕ್ಕಳು ಪ್ರದರ್ಶಿಸಿದ ದೇವರ ಹೆಣ ನಾಟಕದ ದೃಶ್ಯ


ಇನ್ನೊಂದು ಬಹಳ ಮುಖ್ಯವಾದ ಸಂಗತಿಯೆಂದರೆ ತಮ್ಮ ಪ್ರದರ್ಶನದ ನಂತರ ಮಕ್ಕಳು ಬೇರೆ ಮಕ್ಕಳ ಪ್ರದರ್ಶನವನ್ನು ನೋಡದಿರುವುದು. ಹಲವು ರೀತಿಯ ಉತ್ತಮ ಪೈಪೋಟಿಯ ಪ್ರದರ್ಶನಗಳನ್ನು ಮಕ್ಕಳು ನೋಡಬೇಕು; ನೋಡುವಂತೆ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು. ತಮ್ಮದೇ ಶ್ರೇಷ್ಠವೆಂದುಕೊಂಡು ಇನ್ನೊಬ್ಬರ ಪ್ರದರ್ಶನವನ್ನು ತೆಗೆಳಿ ಅನ್ಯಾಯ ಮಾಡಿದ್ದಾರೆಂದು ಶಿಕ್ಷಕರೊಂದಿಗೆ ಮಕ್ಕಳೂ ಸೇರಿಕೊಂಡು ಧಿಕ್ಕಾರ ಕೂಗುವಂತಾಗುತ್ತದೆ.
ಸರ್ಕಾರಿ ಪ್ರೌಢ ಶಾಲೆ, ಕ್ಯಾಲಕೊಂಡದ ಮಕ್ಕಳು ಪ್ರದರ್ಶಿಸಿದ ದೇವರ ಹೆಣ ನಾಟಕದ ದೃಶ್ಯ

ಮಕ್ಕಳು ಸೈನಿಕರಲ್ಲ.

ಪ್ರತಿಭಾಕಾರಂಜಿಯ ನೆಪದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ಮಕ್ಕಳು ಮೂರು ದಿನಗಳ ಕಾಲ ಒಂದೆಡೆ ಸೇರುವ ಅಪೂರ್ವ ಅವಕಾಶ ವರ್ಷಕ್ಕೆ ಒಂದೇ ಬಾರಿ ಸಿಗುವುದು. ಆದರೆ ಅಲ್ಲಿ ಮಕ್ಕಳೆಲ್ಲ ಬಹುಮಾನ ಗೆಲ್ಲಲು ಬಂದ ಸೈನಿಕರಂತೆ ಕಾಣಿಸುತ್ತಾರೆ. ಅವರ ಪ್ರದಶನವಾದರೆ ಮುಗಿಯಿತು. ಆಮೇಲೆ ಬೇರೆಯವರ ಪ್ರದರ್ಶನ ನೋಡುವುದಿಲ್ಲ, ಬೇರೆ ಮಕ್ಕಳೊಂದಿಗೆ ಬೆರೆಯುವುದೇ ಇಲ್ಲ! ಮಕ್ಕಳು ಬಿಡಿ ಶಿಕ್ಷಕರೂ ಕೂಡ ಬೆರೆಯುವುದಿಲ್ಲ. ಸುಮ್ಮನೆ ಉಡುಪಿ ಜಿಲ್ಲೆಯ ಶಿಕ್ಷಕಿಯೊಬ್ಬರನ್ನು ಮಾತಾಡಿಸಿದರೆ ಅವರು ಮಾತಾಡಿದ್ದು ಒಂದೇ ಒಂದು ಶಬ್ದ. ಅದರಾಚೆಗೆ ಮಾತೇ ಆಡಲಿಲ್ಲ. ಇದು ನಮ್ಮೊಳಗೆ ಸೌಹಾರ್ದತೆಯನ್ನು ಮೂಡಿಸುವುದೇ? ಮಕ್ಕಳು ಸೈನಿಕರಲ್ಲ. ಅವರನ್ನು ಹಾಗೆ ತಯಾರುಗೊಳಿಸುವುದೇ ಅಕ್ಷಮ್ಯ. ಇನ್ನು ಬಹುಮಾನ ಬರದಿದ್ದಾಗ ಅಳುವುದು, ಮೋಸ ಮಾಡಿದರೆಂದು ಚೀರುವುದು ಏನನ್ನು ತೋರಿಸುತ್ತದೆ. ನನಗಿಂತ ಪ್ರತಿಭಾವಂತನೊಬ್ಬ ಬಹುಮಾನ ಪಡೆದಿದ್ದಾನೆ ಎಂದು ಸಮಾಧಾನಪಟ್ಟುಕೊಳ್ಳುವ, ಬಹುಮಾನ ಪಡೆದವನನ್ನು ಅಭಿನಂದಿಸಿದ ಮಕ್ಕಳೇ ಅಲ್ಲಿ ಕಾಣಸಿಗಲಿಲ್ಲ.
ಸರ್ಕಾರಿ ಪ್ರೌಢ ಶಾಲೆ, ರಾಜಾಪುರ ಗುಲ್ಬರ್ಗ ಜಿಲ್ಲೆಯ ಮಕ್ಕಳದೊಂದು ಗ್ರೂಪ್ ಫೋಟೋ


ಎಲ್ಲರಿಗೂ ಬಹುಮಾನ ಅಸಾಧ್ಯ. ಹಾಗೊಂದು ವೇಳೆ ಎಲ್ಲರಿಗೂ ಬಹುಮಾನ ನೀಡದೆ ಇದನ್ನೊಂದು ಮಕ್ಕಳ ಉತ್ಸವವನ್ನಾಗಿ ಪರಿವರ್ತಿಸಿದರೆ ಪ್ರತಿಭಾಕಾರಂಜಿ ಸಪ್ಪೆಯಾಗುವುದು ಖಂಡಿತ. ಮಕ್ಕಳ ಭಾಗವಹಿಸುವಿಕೆಯೆ ಕಡಿಮೆಯಾಗುತ್ತದೆ. ಸ್ಪರ್ಧೆ ಎಂದು ಒಪ್ಪಿಕೊಂಡ ಮೇಲೆ ಸೋಲಿಗೂ ತಯಾರಾಗಿರಬೇಕು. ಸೋಲು ಎಂದರೆ ಸೋಲಲ್ಲ; ತನಗಿಂತಲೂ ಪ್ರತಿಭಾವಂತನಿದ್ದಾನೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು. ಶಿಕ್ಷಕರು ಪೋಷಕರೂ ಕೂಡ ಮಕ್ಕಳನ್ನು ಆ ರೀತಿಯಲ್ಲಿ ಅಣಿಗೊಳಿಸಬೇಕು.  ಬಹುಮಾನ ಬರದಿದ್ದಾಗ ಹತಾಶರಾಗುವುದು ಅಳುವುದು ಇದು ಸ್ಪರ್ಧಿಯೊಬ್ಬನ ಲಕ್ಷಣವಲ್ಲ; ಪುಟಿದೆದ್ದು ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಅದು ಗುರಿಯತ್ತ ನಮ್ಮನ್ನು ಮುನ್ನಡೆಸುತ್ತದೆ.

ತೀರ್ಪುಗಾರಿಕೆ

ತೀರ್ಪುಗಾರಿಕೆಯಲ್ಲಿ ಲೋಪವಾಗುವುದಿಲ್ಲ ಎಂದಲ್ಲ. ಆಗುತ್ತದೆ. ಶಿಕ್ಷಕರೂ ಕೂಡ ಪ್ರಾಮಾಣಿಕವಾಗಿ ತೀರ್ಪುಗಾರಿಕೆಯನ್ನು ಮಾಡಬೇಕು. ತನಗೆ ಆ ವಿಷಯದಲ್ಲಿ ಅನುಭವವಿಲ್ಲದಿದ್ದರೆ ಅದರ ತೀರ್ಪುಗಾರಿಕೆಯನ್ನೇ ಒಪ್ಪಿಕೊಳ್ಳಬಾರದು. ಇಲಾಖೆ ಕೂಡ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಸಮಗ್ರವಾದ ನೀತಿಯೊಂದನ್ನು ರೂಪಿಸಬೇಕು. ಕೆಳಹಂತಗಳಲ್ಲೇ ಭಾರೀ ಅನ್ಯಾಯವಾಗುತ್ತದೆ, ಆಯಾಯ ಶಾಲೆಗಳ ಶಿಕ್ಷಕರು ತೀರ್ಪುಗಾರರಾಗಿ ತಮ್ಮ ಮಕ್ಕಳಿಗೆ ಬಹುಮಾನ ಬರುವಂತೆ ನೋಡಿಕೊಂಡು ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಮಾಡಿರುತ್ತಾರೆ. ಇದು ರಾಜ್ಯದ ಎಲ್ಲಾ ಕಡೆಯೂ ನಡೆಯುತ್ತದೆ. ಎಷ್ಟೋ ಉನ್ನತ ಪ್ರತಿಭೆಗಳು ಕ್ಲಸ್ಟರ್ ಹಂತದಲ್ಲಿಯೇ ನಿರ್ಗಮಿಸಿರುತ್ತವೆ. ತಮ್ಮ ಶಾಲೆಯ ಮೇಲಿನ ಮಮಕಾರ ಒಂದು ಅತ್ಯುತ್ತಮ ಪ್ರತಿಭೆಗೆ ಅನ್ಯಾಯವಾಗುವಂತೆ ಮಾಡುತ್ತದೆ. ಶಿಕ್ಷಕರು ಇಂತಹ ಸಣ್ಣತನಗಳನ್ನು ಬಿಟ್ಟು ಮಕ್ಕಳ ಪ್ರತಿಭೆಗಳನ್ನು ಗೌರವಿಸಬೇಕು.
ತೀರ್ಪುಗಾರನಾಗಿ ಭಾಗವಹಿಸಿದ ನಾನು

ಪ್ರತಿಭಾಕಾರಂಜಿ ರಾಜ್ಯದ ಮಕ್ಕಳ ಪ್ರತಿಭೆಗಳನ್ನು ಹೊರತರುವುದಕ್ಕೆ ಹೇಗೆ ಶ್ರಮಿಸುವುದೋ ಹಾಗೆ ನಾಡಿನ ಜಾನಪದ ಕಲೆಗಳನ್ನು ಉಳಿಸುವುದಕ್ಕೂ ಕಾರಣವಾಗಬೇಕು. ಈ ನೆಪದಲ್ಲಿ ತಮ್ಮ ತಮ್ಮ ಜಿಲ್ಲೆಯ ಜಾನಪದ ಕಲೆಗಳನ್ನು ಅಧ್ಯಯನ ಮಾಡಿ ರಾಜ್ಯಮಟ್ಟದಲ್ಲಿ ಅವುಗಳನ್ನು ಪ್ರದರ್ಶಿಸಬೇಕು. ರಾಜ್ಯಮಟ್ಟದ ಪ್ರತಿಭಾಕಾರಂಜಿಯೆಂದರೆ ಅದೊಂದು ನಾಡಿನ ಬಹುವೈವಿಧ್ಯತೆಯ ಜಾನಪದ ಹಬ್ಬವಾಗಬೇಕು. ಮಕ್ಕಳು ಬಹುಮಾನ ಪಡೆಯುವ ಜೊತೆ ಜೊತೆಯಲ್ಲಿಯೇ ನಾಡಿನ ಸಂಸ್ಕøತಿಯ ಅಧ್ಯಯನವನ್ನೂ ಮಾಡುವಂತಾಗಬೇಕು. ಶಿಕ್ಷಕರೇ ಮಕ್ಕಳನ್ನು ಅಂಕಗಳಿಸುವ ಮತ್ತು ಬಹುಮಾನ ಗಳಿಸುವ ಯಂತ್ರಗಳನ್ನಾಗಿ ರೂಪಿಸಬೇಡಿ, ಅವರು ಮಕ್ಕಳು. ಅವರಂತೆಯೆ ಇರುವ ಮಕ್ಕಳೊಂದಿಗೆ ಪ್ರೀತಿಯಿಂದ ಬೆರಯುವಂತೆ, ಲವಲವಿಕೆಯಿಂದ ಬಾಳುವಂತೆ ರೂಪಿಸಿ. ಹಾಗಾದಲ್ಲಿ ನಮ್ಮ ಸಂಸ್ಕøತಿಯೂ ಉಳಿಯುತ್ತದೆ ನಮ್ಮ ಸಮಾಜವೂ ಆರೋಗ್ಯಪೂರ್ಣವಾಗಿರುತ್ತದೆ.

-ಸಂತೋಷ ಗುಡ್ಡಿಯಂಗಡಿ

No comments:

Post a Comment